ರಾಜಕೀಯ – ದುರದೃಷ್ಠಕರ
(ವಿಶ್ವಕನ್ನಡಿಗ ನ್ಯೂಸ್): ನಿಜ ಹೇಳಬೇಕಾದರೆ ಈಗ ಸ್ವಾರ್ಥ ಎಂಬ ಮಹಾ ಪಿಡುಗು ಇಡೀ ದೇಶವನ್ನೇ ನುಂಗಿ ಹೋಗಿದೆ. ನಿಸ್ವಾರ್ಥ ಎಂಬ ಪದಕ್ಕೆ ಬೆಲೆಯೇ ಇಲ್ಲದಂತಾಗಿದೆ. ಚುನಾವಣೆ ಹತ್ತಿರ ಬಂದಂತೆ ಎಲ್ಲಾ ರಾಜಕಾರಣಿಗಳೂ ಮೈ ಕೊಡವಿಕೊಂಡು ತನ್ನ ಪಾಲಿನ ಅಮೃತ ಎಲ್ಲಾದರೂ ಕೈ ತಪ್ಪಿ ಹೋಗುತ್ತದೋ ಎಂಬ ಭಯದಿಂದ ಹೆಚ್ಚು ಕಡಿಮೆ ನಿರಾಹಾರ ಉಪವಾಸವನ್ನೋ ಹಿಡಿದಂತಾಗಿ ಭಾಸವಾಗುತ್ತಿದೆ. ನಿರೀಕ್ಷೆಗೆ ತಕ್ಕಂತೆ ಪ್ರತಿಫಲ ಸಿಗಲಿಲ್ಲವೋ, ಪಕ್ಷ ತನಗೆ ನೀಡಿದದಂತಹ ಹಲವು ವರ್ಷಗಳ ಸಿಹಿಯನ್ನು ಮರೆತು ಬೇರೊಂದು ಪಕ್ಷಕ್ಕೆ ಹಾರಲು ಸಿಧ್ಧತೆ ಮಾಡಿಕೊಂಡಿರುತ್ತಾರೆ. ಪ್ರಜಾಪ್ರಭುತ್ವ ದೇಶದಲ್ಲಿ ಇಂತಹದೊಂದು ಬೆಳವಣಿಗೆ ತುಂಬಾ ನಾಚಿಕೆಗೇಡಿನ ಸಂಗತಿ. ಮುತ್ಸದ್ದಿ ಹಾಗೂ ಹಿರಿಯ ರಾಜಕಾರಣಿಯಾದಂತಹ ಜಾಫರ್ ಶರೀಫ್ ಇದಕ್ಕೊಂದು ನಿದರ್ಶನ.
ಈಗೀಗ ರಾಜಕಾರಣಿಗಳಿಗೆ ತಾವು ಕಟ್ಟಿಟ್ಟ ಬುತ್ತಿ ಎಲ್ಲಾಎದರೋ ಕೈ ತಪ್ಪಿ ಹೋಗುತ್ತದೋ ಎಂಬ ಭಯ. ತನ್ಮೂಲಕ ಜೀವನದ ಇಳಿ ವಯಸ್ಸಿನಲ್ಲಿದ್ದರೂ ತನ್ನ ಮಕ್ಕಳ, ಮರಿಮಕ್ಕಳ ಕೈಪಾಲಾಗಲಿ ಎಂದು ಟಕೇಟಿಗಾಗಿ ಹೈಕಮಾಂಡ್ ನ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಒಂದು ಜಾಯಮಾನವಾಗಿಯೇ ಹೋಗಿದೆ. ಪಕ್ಷ ನಿಷ್ಠೆ ಎಂಬುದು ಮರೀಚಿಕೆಯಾಗಿದೆ. ಇದೇ ತರಾತುರಿಯಲ್ಲಿ ದಲಿತರ ,ಮರ್ದಿತರ ಪ್ರತಿಧ್ವನಿಯಾದಂತಹ ಪಾಸ್ವಾನ್ ನಂತಹವರು ಗೆಲ್ಲುವ ಕುದುರೆಯ ಬಾಲವನ್ನು ಹಿಡಿಯಲು ಹೋಗಿ ಜಾತ್ಯಾತೀತತೆ, ಕೋಮುವಾದ ಎಂಬುವುದು ಕೇವಲ ಚುನಾವಣಾ ತಂತ್ರ ಎಂಬ ಹೇಳಿಕೆಯನ್ನು ನೀಡಿರುವುದು ತುಂಬಾ ದುರದೃಷ್ಟಕರ ಸಂಗತಿ. ಇಂತಹ ಸಂಧಿಗ್ಧ ಪರಿಸ್ಥಿತಯಲ್ಲಿ ಜನಸಾಮಾನ್ಯನು ಕಂಗಾಲಾಗಿದ್ದಾನೆ. ಅವನ ಮುಂದೆ ಯಾವ ಆಯ್ಕೆಯೂ ಇಲ್ಲದಂತಾಗಿದೆ. ಒಟ್ಟಾರೆಯಾಗಿ ಸಂವಿಧಾನ ಬಧ್ಧ ಹಕ್ಕು ಎಂಬ ಭಾವನೆಯೊಂದಿಗೆ ಮತದಾನದಂದು ಯಾವುದಾದರೊಂದು ಗುಂಡಿಗೆ ಒತ್ತಿ ಬರುವುದೇ ವಿನಃ ಯಾರ ಮೇಲೂ ಪ್ರೀತಿ, ವಿಶ್ವಾಸದಿಂದಲ್ಲ.
No comments:
Post a Comment