Tuesday, 22 April 2014

ವರದಕ್ಷಿಣೆ ಪಡೆಯುವವರ ನಿಖಾಃವನ್ನು ತಡೆಯುವ ನಿರ್ಧಾರ

ವರದಕ್ಷಿಣೆ ಪಡೆಯುವವರ ನಿಖಾಃವನ್ನು ತಡೆಯುವ ನಿರ್ಧಾರ

ಬಿಹಾರದ,ನಳಂದ ಜಿಲ್ಲೆಯ ಮಸೀದಿಯ ಇಮಾಮರು (ಧಾರ್ಮಿಕ ಗುರುಗಳು) ವರದಕ್ಷಿಣೆಯ ಬಗ್ಗೆ ತೆಗೆದುಕೊಂಡ ನಿರ್ಧಾರ, ಮುಸ್ಲಿಂ ವಲಯದಲ್ಲಿ ಭಾರೀ ಜನಪ್ರೀಯತೆಯನ್ನು ಗಳಿಸಿಕೊಂಡಿದೆ. ಹಾಗೂ ಮುಸ್ಲಿಂ ಭಾಂಧವರು ತಮ್ಮ ಎಲ್ಲಾ ಸಲಹೆ ಸಹಕಾರಗಳನ್ನು ನೀಡುವ ಭರವಸೆಯನ್ನೂ ನೀಡಿದ್ದಾರೆ.
ಈ ಬಗ್ಗೆ ಕಳೆದ ವಾರ ನಳಂದಜಿಲ್ಲೆಯ ಕಾಝಿಯವರು ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂಧರ್ಭದಲ್ಲಿ ಜಿಲ್ಲೆಯ ಎಲ್ಲಾ ಮಸೀದಿಗಳ ಇಮಾಮರು, ವರದಕ್ಷಿಣೆ ಕೊಡುವವರು ಹಾಗೂ ಪಡಕೊಳ್ಳುವವರ ಮದುವೆ ಸಮಾರಂಭದಲ್ಲಿ ನಿಖಾವನ್ನು ಮಾಡದಿರಲು ನಿರ್ಧರಿಸಿರುತ್ತಾರೆ. ದಿನಂಪ್ರತಿ ಹೆಚ್ಚುತ್ತಿರುವ ವರದಕ್ಷಿಣೆ ಸಮಸ್ಯೆಗಳಿಂದಾಗಿ ಉಂಟಾಗುವ ಪರಿಣಾಮಗಳ ಬಗ್ಗೆ ತೀವ್ರ ನೊಂದು ವಾರದ ಹಿಂದೆ ನಡೆದ ಸಮಾರಂಭದಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.
ಈ ತೀರ್ಪಿನ ವರದಿಯನ್ನು ನಳಂದ ಜಿಲ್ಲೆಯ ಕಾಝಿಯವರಾದ ಮೌಲಾನಾ ಮನ್ಸೂರ್ ಆಲಮ್ ರವರು ಎಲ್ಲರ ಮುಂದೆ ಪ್ರಕಟಿಸಿದರು. ನಿಜವಾಗಿಯೂ, ವರದಕ್ಷಿಣೆ ಪಡೆಯುವವರ ವಿರುಧ್ಧ ತೆಗೆದುಕೊಂಡಂತಹ ಈ ನಿಲುವು ಒಂದು ಐತಿಹಾಸಿಕ ಹೆಜ್ಜೆಯಾಗಿದೆ ಈ ಮಹತ್ವದ ಹೆಜ್ಜೆ ವರದಕ್ಷಿಣೆಗಾಗಿ ಹಾತೊರೆಯುವವರಲ್ಲಿ ಸಂಚಲನ ಮೂಡಿಸಿದೆ. ಅವರು ಈಗ ಅಧೀರರಾಗಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ವರದಕ್ಷಿಣೆ ಪಡೆಯುವವರ ವಿರುಧ್ದ ಇದೊಂದು ಸಾಮಾಜಿಕ ಬಹಿಷ್ಕಾರವೂ ಆಗಿದೆ. ಈ ನಿರ್ಧಾರದಲ್ಲಿ ನಾವು ನಳಂದ ಜಿಲ್ಲೆಯಲ್ಲಿ ಸಫಲರಾದಲ್ಲಿ ಬಿಹಾರದ ಇನ್ನುಳಿದ ಜಿಲ್ಲೆಗಳಲ್ಲಿಯೂ ಇದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಮೌಲಾನಾ ಮನ್ಸೂರ್ ಆಲಮ್ ರವರು ಹೇಳಿದರು. ಇದಕ್ಕಾಗಿ ಇನ್ನುಳಿದ ಎಲ್ಲಾ ಜಿಲ್ಲೆಗಳ ಮಸೀದಿಗಳ ಇಮಾಮರುಗಳನ್ನು ಒಟ್ಟುಗೂಡಿಸಿ ತಾವೂ ಈ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಲಿದ್ದೇವೆ ಎಂದಿದ್ದಾರೆ. ಮುಸ್ಲಿಂ ವಲಯದಲ್ಲಿ ಈ ತೀರ್ಪನ್ನು ತುಂಬು ಹೃದಯದಿಂದ ಸ್ವಾಗತಿಸಲಾಗಿದೆ.
ಪಟ್ನಾ ಜಿಲ್ಲೆಯ ಮುಸ್ಲಿಂ ಸಂಘಟನೆಯ ಅಧ್ಯಕ್ಷರೂ ಆದಂತಹ ಗುಲಾಮ್ ರಸೂಲ್ ರವರು, ವರದಕ್ಷಿಣೆ ಪಡೆಯುವವರನ್ನು ಎಚ್ಚರಿಸಲಿಕ್ಕಾಗಿ ಹಾಗೂ ಈ ಬಗ್ಗೆ ಮುಸ್ಲಿಮರಲ್ಲಿ ಜಾಗ್ರತಿಯನ್ನು ಉಂಟುಮಾಡಲಿಕ್ಕಾಗಿ ತೆಗೆದುಕೊಂಡಂತಹ ಮಹತ್ವದ ಸಕಾರಾತ್ಮಕ ತೀರ್ಪಾಗಿದೆ ಇದು. ನಾನು ಎಲ್ಲಾ ತರಹದ ಸಂಪೂರ್ಣ ಸಲಹೆ ಸಹಕಾರಗಳನ್ನು ತಮಗೆ ನೀಡುತ್ತೇನೆ ಎಂದು ಹೇಳಿರುವುದು ತುಂಬಾ ಸಂತೋಷದ ವಿಷಯ.
ಪವಿತ್ರ ಇಸ್ಲಾಂ ಧರ್ಮದಲ್ಲಿ ವರದಕ್ಷಿಣೆ ಎಂಬ ಕಲ್ಪನೆಯೇ ಇಲ್ಲ. ಆದರೂ ಇನ್ನೂ ಹಲವು ಕಡೆ ಮುಸ್ಲಿಮರ ನಡುವೆ ಈ ಅನಿಷ್ಟ ಪದ್ದತಿ ಜೀವಂತವಿರುವುದು ಬಹುದೊಡ್ಡ ದೌರ್ಭಾಗ್ಯಪೂರ್ಣ ವಿಷಯ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ ಉಲಮಾ ಉಮರಾಗಳು ಒಟ್ಟು ಸೇರಿ ಇಂತಹದೇ ತೀರ್ಮಾನವನ್ನು ತೆಗೆದುಕೊಂಡಿದ್ದರೆ ಖಂಡಿತವಾಗಿಯೂ ಅದು ಸಮಾಜದಲ್ಲಿ ಬಹುದೊಡ್ಡ ಪರಿಣಾಮವನ್ನು ಬೀರಬಹುದು.

ರಾಜಕೀಯ-ದುರದೃಷ್ಟಕರ

ರಾಜಕೀಯ – ದುರದೃಷ್ಠಕರ

(ವಿಶ್ವಕನ್ನಡಿಗ ನ್ಯೂಸ್): ನಿಜ ಹೇಳಬೇಕಾದರೆ ಈಗ ಸ್ವಾರ್ಥ ಎಂಬ ಮಹಾ ಪಿಡುಗು ಇಡೀ ದೇಶವನ್ನೇ ನುಂಗಿ ಹೋಗಿದೆ. ನಿಸ್ವಾರ್ಥ ಎಂಬ ಪದಕ್ಕೆ ಬೆಲೆಯೇ ಇಲ್ಲದಂತಾಗಿದೆ. ಚುನಾವಣೆ ಹತ್ತಿರ ಬಂದಂತೆ ಎಲ್ಲಾ ರಾಜಕಾರಣಿಗಳೂ ಮೈ ಕೊಡವಿಕೊಂಡು ತನ್ನ ಪಾಲಿನ ಅಮೃತ ಎಲ್ಲಾದರೂ ಕೈ ತಪ್ಪಿ ಹೋಗುತ್ತದೋ ಎಂಬ ಭಯದಿಂದ ಹೆಚ್ಚು ಕಡಿಮೆ ನಿರಾಹಾರ ಉಪವಾಸವನ್ನೋ ಹಿಡಿದಂತಾಗಿ ಭಾಸವಾಗುತ್ತಿದೆ. ನಿರೀಕ್ಷೆಗೆ ತಕ್ಕಂತೆ ಪ್ರತಿಫಲ ಸಿಗಲಿಲ್ಲವೋ, ಪಕ್ಷ ತನಗೆ ನೀಡಿದದಂತಹ ಹಲವು ವರ್ಷಗಳ ಸಿಹಿಯನ್ನು ಮರೆತು ಬೇರೊಂದು ಪಕ್ಷಕ್ಕೆ ಹಾರಲು ಸಿಧ್ಧತೆ ಮಾಡಿಕೊಂಡಿರುತ್ತಾರೆ. ಪ್ರಜಾಪ್ರಭುತ್ವ ದೇಶದಲ್ಲಿ ಇಂತಹದೊಂದು ಬೆಳವಣಿಗೆ ತುಂಬಾ ನಾಚಿಕೆಗೇಡಿನ ಸಂಗತಿ. ಮುತ್ಸದ್ದಿ ಹಾಗೂ ಹಿರಿಯ ರಾಜಕಾರಣಿಯಾದಂತಹ ಜಾಫರ್ ಶರೀಫ್ ಇದಕ್ಕೊಂದು ನಿದರ್ಶನ.

- ಮೌಲಾನಾ ಅಬ್ದುಲ್ ಹಫೀಝ್, ಕುವೈಟ್.
ಈಗೀಗ ರಾಜಕಾರಣಿಗಳಿಗೆ ತಾವು ಕಟ್ಟಿಟ್ಟ ಬುತ್ತಿ ಎಲ್ಲಾಎದರೋ ಕೈ ತಪ್ಪಿ ಹೋಗುತ್ತದೋ ಎಂಬ ಭಯ. ತನ್ಮೂಲಕ ಜೀವನದ ಇಳಿ ವಯಸ್ಸಿನಲ್ಲಿದ್ದರೂ ತನ್ನ ಮಕ್ಕಳ, ಮರಿಮಕ್ಕಳ ಕೈಪಾಲಾಗಲಿ ಎಂದು ಟಕೇಟಿಗಾಗಿ ಹೈಕಮಾಂಡ್ ನ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಒಂದು ಜಾಯಮಾನವಾಗಿಯೇ ಹೋಗಿದೆ. ಪಕ್ಷ ನಿಷ್ಠೆ ಎಂಬುದು ಮರೀಚಿಕೆಯಾಗಿದೆ. ಇದೇ ತರಾತುರಿಯಲ್ಲಿ ದಲಿತರ ,ಮರ್ದಿತರ ಪ್ರತಿಧ್ವನಿಯಾದಂತಹ ಪಾಸ್ವಾನ್ ನಂತಹವರು ಗೆಲ್ಲುವ ಕುದುರೆಯ ಬಾಲವನ್ನು ಹಿಡಿಯಲು ಹೋಗಿ ಜಾತ್ಯಾತೀತತೆ, ಕೋಮುವಾದ ಎಂಬುವುದು ಕೇವಲ ಚುನಾವಣಾ ತಂತ್ರ ಎಂಬ ಹೇಳಿಕೆಯನ್ನು ನೀಡಿರುವುದು ತುಂಬಾ ದುರದೃಷ್ಟಕರ ಸಂಗತಿ. ಇಂತಹ ಸಂಧಿಗ್ಧ ಪರಿಸ್ಥಿತಯಲ್ಲಿ ಜನಸಾಮಾನ್ಯನು ಕಂಗಾಲಾಗಿದ್ದಾನೆ. ಅವನ ಮುಂದೆ ಯಾವ ಆಯ್ಕೆಯೂ ಇಲ್ಲದಂತಾಗಿದೆ. ಒಟ್ಟಾರೆಯಾಗಿ ಸಂವಿಧಾನ ಬಧ್ಧ ಹಕ್ಕು ಎಂಬ ಭಾವನೆಯೊಂದಿಗೆ ಮತದಾನದಂದು ಯಾವುದಾದರೊಂದು ಗುಂಡಿಗೆ ಒತ್ತಿ ಬರುವುದೇ ವಿನಃ ಯಾರ ಮೇಲೂ ಪ್ರೀತಿ, ವಿಶ್ವಾಸದಿಂದಲ್ಲ.

ಚುನಾವಣೆ ಗಿಮಿಕ್

ಚುನಾವಣೆ ಗಿಮಿಕ್

(ವಿಶ್ವ ಕನ್ನಡಿಗ ನ್ಯೂಸ್)ಈಗಾಗಲೇ ಚುನಾವಣೆಯ ಕಾವು ರಂಗೇರುತ್ತಿದೆ. ರಾಜಕಾರಣಿಗಳು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಇನ್ನಿಲ್ಲದಂತೆ ಮತದಾರರನ್ನು ಸೆಳೆಯಲಿಕ್ಕಾಗಿ ಪ್ರತಿಯೊಬ್ಬರೂ ತನ್ನ ತನ್ನ ಕಸರತ್ತನ್ನು ಮಾಡುತ್ತಿರುವುದನ್ನು ನಿತ್ಯ ಗಮನಿಸುತ್ತಿದ್ದೇವೆ. ವಿಶೆಷತಃ ಮುಸ್ಲಿಮರ ಓಲೈಕೆಗಂತೂ ಕೊನೆಯೇ ಇಲ್ಲದಂತಾಗಿದೆ. ಜಾತ್ಯಾತೀತ ಎಂಬ ಪದ ಅದೆಂದೋ ಮಾಸಿ ಹೋಗಿತ್ತು.
ಈಗ ಅದಕ್ಕೆ ನೀರೆರಚಿ ಪುನರುಜ್ಜೀವಗೊಳಿಸಲಾಗುತ್ತಿದೆ. ಮುಸ್ಲಿಮರ ಬಗ್ಗೆ, ಅವರ ಮೇಲೆ ಆಗುವಂತಹ ದಮನಕಾರಿ ಶೋಷಣೆಯ ಬಗ್ಗೆ ಇನ್ನಿಲ್ಲದಂತೆ ಭಾಷಣ ಬಿಗಿಯಲಾಗುತ್ತಿದೆ.ಗುಜರಾತ್ ನಲ್ಲಿ ಅದಾಗಲೇ ಪಾಪದ ಕೊಡ ತುಂಬಿ ತುಳುಕುತ್ತಿದೆ. ಹೀಗಿರುವಾಗ ಮುಖ್ಯಮಂತ್ರಿಯೋರ್ವರು ನನಗೆ ನೋವಿದೆ ಎಂದು ಹೇಳಿದಾಕ್ಷಣ ಎಲ್ಲವನ್ನೂ ಮರೆತು ಬಿಡಲಿಕ್ಕೆ ಸಾಧ್ಯವಿದೆಯಾ?
ಇದೊಂದು ಚುನಾವಣೆ ಗಿಮಿಕ್ ಅಷ್ಡೇ. ಚುನಾವಣೆ ಆಗಿ ಕುರ್ಚಿ ಗಟ್ಟಿ ಆಗುವುದೇ ತಡ. ನಾನು ಅಂತಹ ಮಾತು ಹೇಳಲೇ ಇಲ್ಲ, ಇದು ಮಾಧ್ಯಮಗಳ ಸೃಷ್ಟಿ ಎಂದು ಹೇಳಲು ಇವರು ಹಿಂಜರಿಯುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಯಾರು ನಿಷ್ಠಾವಂತರು ಯಾರು ಕಲುಷಿತರು ಎಂದು ಕಂಡುಹಿಡಿಯುವುದೇ ಯಕ್ಷ ಪ್ರಶ್ನೆ..?