Wednesday, 2 July 2014

ಉಪವಾಸ ಹಾಗೂ ಸತ್ಯ ವಿಶ್ವಾಸಿಯ ಆಹಾರ ಶೈಲಿ : (ರಂಝಾನ್ ಸ್ಪೆಷಲ್)

(ವಿಶ್ವ ಕನ್ನಡಿಗ ನ್ಯೂಸ್) : ಮಿಕ್ ದಾದ್ ಬಿನ್ ಮಅದಿ ಕರಬ್ ರಿಂದ ವರದಿ: ಪ್ರವಾದಿವರ್ಯರು(ಸ) ಹೇಳುವುದನ್ನು ನಾನು ಕೇಳಿದ್ದೇನೆ: ಹೊಟ್ಟೆಗಿಂತ ಕೆಟ್ಟ ಪಾತ್ರೆಯನ್ನು ಮಾನವನು ತುಂಬಿಸಿಲ್ಲ. ಮಾನವ ಪುತ್ರನಿಗೆ ಅವನ ಬೆನ್ನೆಲುಬನ್ನು ನೇರ ನಿಲ್ಲಿಸಲು ಕೆಲವು ತುತ್ತುಗಳೇ ಸಾಕು. ಅದಕ್ಕಿಂತ ಹೆಚ್ಚು ಬೇಕೇ ಬೇಕೆಂದಾದರೆ, ಹೊಟ್ಟೆಯ 3/1 ಭಾಗ ಆಹಾರಕ್ಕೆ, 3/1 ನೀರಿಗೆ ಮತ್ತು 3/1 ಉಸಿರಾಟಕ್ಕೆ ಮೀಸಲಿಡಲಿ (ತಿರ್ಮಿದಿ)
ಮಾನವ ಕುಲಕ್ಕೆ ಎಲ್ಲ ವಿಷಯಗಳಲ್ಲಿಯೂ ಮಾರ್ಗದರ್ಶನ ನೀಡುವ ಪವಿತ್ರ ಕುರ್ ಆನ್ ಮತ್ತು ಪ್ರವಾದಿ ಚರ್ಯೆಯು ಇಲ್ಲಿ ಈ ಹದೀಸ್ ನಲ್ಲಿ ಆರೋಗ್ಯಪೂರ್ಣ ಆಹಾರ ಶೈಲಿಯನ್ನು ಕಲಿಸುತ್ತಿದೆ. ಒಮ್ಮೆ ಆಲೋಚಿಸಿ ನೋಡಿ, ಪ್ರವಾದಿವರ್ಯರ(ಸ್ವ.ಸ್ವ.) ಈ ಆಹಾರ ಶೈಲಿಯನ್ನೇ ಆಧುನಿಕ ವೈದ್ಯ ಶಾಸ್ತ್ರವೂ ಮಾನವನಿಗೆ ಕಲಿಸುತ್ತಿದೆ. ಹಸಿವೆಯ ರೋಗಗಳಿಗಿಂತ ಹೆಚ್ಚಾಗಿ ಅಮಿತ ಆಹಾರದ ದುರಂತಗಳನ್ನು ಅನುಭವಿಸುತ್ತಿರುವ ಆಧುನಿಕ ಮಾನವ ಸಮೂಹಕ್ಕೆ ಪ್ರವಾದಿವರ್ಯರ(ಸ್ವ.ಸ್ವ.) ಈ ಮಾರ್ಗದರ್ಶನವು ಬಹಳ ಉಪಯುಕ್ತವಾಗಿದೆ.
ಆಹಾರವು ಜೀವರಕ್ಷಣೆಯ ಅನಿವಾರ್ಯ ಘಟಕ ಮತ್ತು ಆರೋಗ್ಯ ರಕ್ಷಣೆಯಲ್ಲಿ ಅದರ ಪಾತ್ರ ಪ್ರಧಾನ ಎಂದು ಎಲ್ಲರಿಗೂ ತಿಳಿದಿದೆ. ಆದ್ದರಿಂದಲೇ ಪವಿತ್ರ ಕುರ್ ಆನ್ ಮತ್ತು ಪ್ರವಾದಿ ಚರ್ಯೆಯು ಒಂದು ಶಾಸ್ತ್ರೀಯ ಆಹಾರ ಶೈಲಿಯನ್ನು ಕಲಿಸುತ್ತಿದೆ. ಮಾನವನ ಜಠರವನ್ನು ಕೆಡಿಸಿ, ದೇಹದ ಪ್ರಮುಖ ಅಂಗಾಗಳನ್ನು ಹಾನಿಗೊಳಿಸುವ ಅಮಿತ ಭೋಜನದ ಬಗ್ಗೆ ಕುರ್ ಆನ್ ಹೀಗೆ ಹೇಳಿದೆ: `ನೀವು ತಿನ್ನಿರಿ, ಕುಡಿಯಿರಿ, ಆದರೆ ಮಿತಿಮೀರಬೇಡಿರಿ. ಮಿತಿ ಮೀರುವವರನ್ನು ಅಲ್ಲಾಹನು ಮೆಚ್ಚುವುದಿಲ್ಲ.’ ಆಹಾರದ ನಿಯಮ-ನಿಷೇಧಗಳನ್ನು ನೋಡದೆ ಸಿಕ್ಕಾಪಟ್ಟೆ ತಿಂದು ಹೊಟ್ಟೆ ತುಂಬಿಸುವವರು ಮತ್ತು ತಮ್ಮ ಸಂಪತ್ತನ್ನು ಸಂಪೂರ್ಣವಾಗಿ ಆಹಾರಕ್ಕಾಗಿ ವ್ಯಯಿಸುವ ವಿನಾ ಜೀವನಕ್ಕೆ ಬೇರೆ ಯಾವುದೇ ಗುರಿಯಿಲ್ಲದವರನ್ನು ಕುರ್ ಆನ್ ಇಲ್ಲಿ ಎಚ್ಚರಿಕೆ ನೀಡಿದೆ. ಈ ವಚನದ ವಿವರಣೆಯಲ್ಲಿ ಇಬ್ನು ಕಸೀರ್ ಹೀಗೆ ಹೇಳಿದ್ದಾರೆ: `ಅಲ್ಲಾಹನು ವೈದ್ಯಕೀಯವನ್ನು ಸಂಪೂರ್ಣವಾಗಿ ಒಂದು ವಚನದ ತುಣುಕಿನಲ್ಲಿ ಸೇರಿಸಿದ್ದಾನೆ. ಇದು ಪವಿತ್ರ ಕುರ್ ಆನ್ ನಲ್ಲಿ ವೈದ್ಯ ಶಾಸ್ತ್ರಕ್ಕೆ ಸಂಬಂಧಿಸಿದ ಪ್ರಮುಖ ವಚನವೂ ಆಗಿದೆ.
ಪ್ರವಾದಿವರ್ಯರು(ಸ್ವ.ಸ್ವ.) ಅತಿಭೋಜನದ ಅಪಾ ಯದ ಬಗ್ಗೆ ಹಲವು ಬಾರಿ ಸೂಚಿಸಿದ್ದಾರೆ. ಹೊಟ್ಟೆ ತುಂಬಿಸುವ ಬಗ್ಗೆ ನೀವು ಎಚ್ಚರವಹಿಸಿರಿ, ಯಾಕೆಂದರೆ ಹೊಟ್ಟೆ ತುಂಬಿಸುವಿಕೆಯು ದೇಹವನ್ನು ಕೆಡಿಸಿ ರೋಗವನ್ನು ಆಮಂತ್ರಿಸಿ, ನಮಾಝ್ನಿಂ ದ ಉದಾಸೀನಗೊಳಿಸುತ್ತದೆ. ಆದ್ದರಿಂದ ನೀವು ಮಿತ ಆಹಾರ ಸೇವಿಸುವಿರಾಗಿ.’ ಅತಿಭೋಜನವನ್ನು ತೊರೆಯುವುದರಿಂದ ನಮಗೆ ಆರೋಗ್ಯಪೂರ್ಣ ದೇಹದೊಂದಿಗೆ ದೃಢ ಮನಸ್ಸನ್ನೂ ಪಡೆಯಬಹುದೆಂದು ಈ ಪ್ರವಾದಿ ವಚನದಿಂದ ಗ್ರಹಿಸಬಹುದು. ಯಾಕೆಂದರೆ ಅಮಿತ ಆಹಾರವು ದೇಹವನ್ನು ಕೆಡಿಸುವುದರೊಂದಿಗೆ ನಮಾಝ್ನಬಲ್ಲಿ ಮನಸ್ಸಿನ ಏಕಾಗ್ರತೆಯನ್ನು ಹಾಳುಗೆಡಹುತ್ತದೆ. ಇಮಾಮ್ ಗಝ್ಝಾಲಿ ತಮ್ಮ ಇಹ್ಯಾಉಲೂಮುದ್ದೀನ್ ನಲ್ಲಿ, ಅತಿಭೋಜನದ ಕೆಡುಕುಗಳನ್ನು ಎಣಿಸಿ ಹೇಳಿದ್ದಾರೆ: `ಅತಿ ಬೋಜನವು ಬುದ್ಧಿಯ ಪ್ರಕ್ರಿಯೆಗಳನ್ನು ಕೆಡಿಸಿ, ಹೃದಯದ ಒಳದೃಷ್ಟಿ ಯನ್ನು ನಷ್ಟಗೊಳಿಸುತ್ತದೆ. ಅದರಿಂದಾಗಿ ವಿಷಯ ಗಳನ್ನು ಸುಲಭದಲ್ಲಿ ಗ್ರಹಿಸಲು ಸಾಧ್ಯವಾಗುವುದಿಲ್ಲ’ ಅರ್ಥಾತ್, ಅಮಿತ ಆಹಾರವು ನಮ್ಮ ಬುದ್ಧಿ ಮತ್ತು ಮನಸ್ಸನ್ನು ಮರಗಟ್ಟಿಸಿ ತಿಳುವಳಿಕೆಯನ್ನು ನಾಶಗೊಳಿಸಿ ನಮ್ಮನ್ನು ಸಂಪೂರ್ಣವಾಗಿ ಸೋಮಾರಿಗಳನ್ನಾಗಿ ಮಾಡುತ್ತದೆ. ಪ್ರವಾದಿವರ್ಯರು(ಸ) ಹೇಳಿದರು: `ಹಸಿವೆಯು ಜ್ಞಾನದ ಪ್ರಕಾಶವಾಗಿದೆ. ಅಮಿತ ಭೋಜನವು ಅಲ್ಲಾಹನಿಂದ ದೂರವಾಗುವ ಸಂಕೇತವಾಗಿದೆ. ಆದ್ದರಿಂದ, ಅಮಿತ ಭೋಜನದಿಂದ ನಾವು ಹೃದ ಯದಿಂದ ಜ್ಞಾನದ ಪ್ರಕಾಶವನ್ನು ನಂದಿಸಿಬಿಡುತ್ತೇವೆ. 


ಅಮಿತ ಬೋಜನವನ್ನು ಪ್ರವಾದಿವರ್ಯರು(ಸ) ಅವಿಶ್ವಾಸಿಯ ಸ್ವಭಾವವೆಂದೂ ವರ್ಣಿಸಿದ್ದಾರೆ. ಬುಖಾರಿ ಮತ್ತು ಮುಸ್ಲಿಮ್ ಉದ್ಧರಿಸಿರುವ ಒಂದು ಹದೀಸ್ ನಲ್ಲಿ ಹೀಗಿದೆ: ಸತ್ಯವಿಶ್ವಾಸಿಯು ಒಂದು ಜಠರದಿಂದ ತಿನ್ನುವಾಗ ಅವಿಶ್ವಾಸಿಯು ಏಳು ಜಠರಗಳಲ್ಲಿ ತಿನ್ನುತ್ತಾನೆ. ಇಲ್ಲಿ ಸತ್ಯವಿಶ್ವಾಸಿ ಮತ್ತು ಅವಿಶ್ವಾಸಿಯ ಆಹಾರ ಶೈಲಿಯ ವ್ಯತ್ಯಾಸವನ್ನು ಸೂಚಿಸಲಾಗಿದೆ. ಮಿತಾಹಾರ ಸೇವನೆಯು ಸತ್ಯವಿಶ್ವಾಸಿಗೆ ಕೇವಲ ಆರೋಗ್ಯದಾಯಕ ಕರ್ಮ ಮಾತ್ರವಲ್ಲ, ಅವನ ಧಾರ್ಮಿಕ ಕರ್ತವ್ಯವೂ ಆಗಿದೆ. ಒಮ್ಮೆ ಡೊಳ್ಳೊಟ್ಟೆಯ ಓರ್ವರನ್ನು ಪ್ರವಾದಿ ವರ್ಯರು(ಸ) ನೋಡಿದಾಗ ಅವರ ಹೊಟ್ಟೆಗೆ ಬೆಟ್ಟು ಮಾಡಿ,ಇದು ಇಲ್ಲದಿರುತ್ತಿದ್ದರೆ ಅದೇ ನಿನಗೆ ಹಿತಕರವಾಗುತ್ತಿತ್ತು’ ಎಂದು ಹೇಳಿದರು. (ಅಹ್ಮದ್, ಬೈಹಕಿ) ಅಮಿತ ಆಹಾರ ಸೇವನೆಯಿಂದಾಗುವ ಡೊಳ್ಳೊಟ್ಟೆಯನ್ನು ಸೂಚಿಸಿ ಪ್ರವಾದಿ(ಸ) ಆ ರೀತಿ ಹೇಳಿದ್ದರು. ಆಹಾರವು ಒಂದು ಫ್ಯಾಶನ್ ಮತ್ತು ಆಡಂಬರದ ಪ್ರತೀಕವಾಗಿರುವ ಈ ಕಾಲದಲ್ಲಿ ಇಸ್ಲಾಮ್ ಆದೇಶಿಸಿರುವ ಹೊಟ್ಟೆಯ 3/2 ಭಾಗ ವನ್ನು ಆಹಾರ ಪಾನೀಯ ಮತ್ತು ಉಳಿದ ಭಾಗ ವನ್ನು ಉಸಿರಾಟಕ್ಕೆ ಅಡ್ಡಿಯಾಗದಂತೆ ಶೂನ್ಯವಾಗಿರಿಸಲು ಮಾನವನು ಸಿದ್ಧನಾದರೆ ಆತನಿಗೆ ಆರೋಗ್ಯ ಪೂರ್ಣ ದೇಹ ಮತ್ತು ಆರೋಗ್ಯಪೂರ್ಣ ಮನಸ್ಸು ಪ್ರಾಪ್ತವಾಗುತ್ತದೆ. ಆರೋಗ್ಯಪೂರ್ಣ ದೇಹವು ಇಸ್ಲಾಮಿನ ಗುರಿಯಾಗಿದೆ. ಆದ್ದರಿಂದಲೇ ಇಸ್ಲಾಮ್ ಸುವ್ಯವಸ್ಥಿತ ಮತ್ತು ವೈಜ್ಞಾನಿಕ ಆಹಾರ ಶೈಲಿಯನ್ನು ಕಲಿಸುತ್ತಿದೆ. ನಿರಂತರವಾದ ಒಂದು ತಿಂಗಳ ಉಪವಾಸವು ಇದಕ್ಕೊಂದು ಉತ್ತಮ ನಿದರ್ಶನ.

ಉಪವಾಸ ಮತ್ತು ಅಲ್ಲಾಹನ ಜೊತೆಗಿನ ಸಂಭಂಧ : (ರಂಝಾನ್ ಸ್ಪೆಷಲ್)

(ವಿಶ್ವ ಕನ್ನಡಿಗ ನ್ಯೂಸ್) : ಉಪವಾಸ ಎಲ್ಲಾ ತರಹದ ಕಾಪಟ್ಯತೆಯಿಂದ ಮುಕ್ತವಾದ ಇಬಾದತ್(ಪ್ರಾರ್ಥನೆ) ಆಗಿದೆ. ನಮಾಝ್, ಹಜ್, ಝಿಕ್ರ್ ಇದು ಶಾರೀರಿಕವಾಗಿ ಮಾಡುವಂತಹ ಪ್ರಾರ್ಥನೆಗಳಾಗಿವೆ. ಝಕಾತ್ ಇದು ಸಿರಿವಂತರ ಮೂಲಕ ಬಡವರು ಪಡೆಯುವಂತಹ ಆರ್ಥಿಕ ಪ್ರಯೋಜನಗಳು. ಇದನ್ನು ನಾವು ಕಣ್ಣಾರೆ ನೋಡಬಹುದು. ಆದರೆ ಉಪವಾಸ, ಇದರಲ್ಲಿ ಒಬ್ಬ ವ್ಯಕ್ತಿಯು ಅಲ್ಲಾಹನ ಸಂಪ್ರೀತಿಗಾಗಿ ಅನ್ನಪಾನೀಯಗಳನ್ನು ತೊರೆದು ದೈಹಿಕವಾದ ಎಲ್ಲಾ ಸುಖಗಳಿಂದ ತನ್ನನ್ನು ದೂರವಿರಿಸುತ್ತಾನೆ. ನಿಜವಾಗಿಯೂ ಇದರಲ್ಲಿ ಉಪವಾಸದಿಂದಿರುವ ವ್ಯಕ್ತಿಯು ಹಸಿವಿನಿಂದ ಇದ್ದಾನೋ ಅಥವಾ ಇಲ್ಲವೋ ಎಂದು ಸ್ವಷ್ಟವಾಗಿ ಹೇಳಲು ಸಾಧ್ಯವಿಲ್ಲ. ಅಲ್ಲಾಹನನ್ನು ವಿಶೇಷವಾಗಿ ಭಯಪಟ್ಟು ಅವನು ಈ ತ್ಯಾಗಕ್ಕೆ ಅಣಿಯಾಗುತ್ತಾನೆ. ಇದರಿಂದಿ ನೇರವಾಗಿ ಅವನ ಸಂಭಂಧವು ಅಲ್ಲಾಹನ ಜೊತೆಗಿರುತ್ತದೆ.
ಇದಕ್ಕಾಗಿಯೇ, ಉಪವಾಸದ ಮಹತ್ವವನ್ನು ವಿವರಿಸುತ್ತಾ ಪ್ರವಾದಿ ಮುಹಮ್ಮದ್(ಸ್ವ.ಸ್ವ)ರವರು ಹೇಳುತ್ತಾರೆ, ಅಲ್ಲಾಹನು ಹೇಳುತ್ತಾನೆ, ಉಪವಾಸದ ಹೊರತು ಎಲ್ಲಾ ಪುಣ್ಯ ಕಾರ್ಯಗಳು ಅದನ್ನು ಮಾಡುವ ವ್ಯಕ್ತಿಗಾಗಿದೆ ಆದರೆ ಉಪವಾಸ ಹಾಗಲ್ಲ, ಇದು ನನಗಾಗಿದೆ ಹಾಗೂ ಇದರ ಪ್ರತಿಫಲವನ್ನು ನಾನೇ ಸ್ವತಃ ನೀಡುತ್ತೇನೆ( ಸಹೀಹ್ ಬುಖಾರಿ:). ಉಪವಾಸವನ್ನು ಅಲ್ಲಾಹನು ತನ್ನ ಜೊತೆಗೆ ಸಂಭಂಧಿಸಿದಾಗ ಇದರಲ್ಲಿ ತೋರಿಕೆಯ ಪ್ರಶ್ನೆಯೇ ಉಧ್ಬವಿಸುವುದಿಲ್ಲ. 


ಈ ಹದೀಸ್ ನ ಪ್ರಕಾರ ಒಂದು ಮಾತಂತು ನಮಗೆ ತಿಳಿಯುತ್ತದೆ, ಎಲ್ಲಾ ಇಬಾದತ್(ಪುಣ್ಯ ಕಾರ್ಯ) ಗಳ ಪ್ರತಿಫಲವನ್ನು ಅಲ್ಲಾಹನು ಮಲಾಯಿಕ್ (ದೇವದೂತರು) ಗಳ ಮುಖಾಂತರ ನೀಡುವನು ಆದರೆ ಉಪವಾಸದ ಪ್ರತಿಫಲವನ್ನು ಅಲ್ಲಾಹನು ಸ್ವತಃ ನೀಡುವನು. ತನ್ಮೂಲಕ ಅಲ್ಲಾಹನು ಉಪವಾಸವನ್ನು ಇಡುವ ತನ್ನ ದಾಸರನ್ನು ವಿಶೇಷವಾಗಿ ಗೌರವಿಸಿದ್ದಾನೆ. ನಿಜವಾಗಿಯೂ ಇದು ಒಂದು ವ್ಯಕ್ತಿಗೆ ಸಿಗುವಂತಹ ಮಹಾನ್ ಗೌರವವಾಗಿದೆ. ಸ್ವತಃ ಅಲ್ಲಾಹನೇ ತನ್ನ ವತಿಯಿಂದ ನೀಡುವಂತಹ ಪ್ರತಿಫಲಗಳು ಯಾವ ತರಹದ್ದಾಗಿರಬಹುದು ಇದನ್ನು ಊಹಿಸಲೂ ಅಸಾಧ್ಯ.

ಉಪವಾಸದ ಅರ್ಥ : (ರಂಝಾನ್ ಸ್ಪೆಷಲ್)

(ವಿಶ್ವ ಕನ್ನಡಿಗ ನ್ಯೂಸ್) : ಪವಿತ್ರ ಕುರ್ ಆನಿನ ಎರಡನೇ ಅಧ್ಯಾಯದಲ್ಲಿ ಅಲ್ಲಾಹನು ರಮಝಾನ್ ತಿಂಗಳ ಉಪವಾಸದ ಮಹತ್ವವನ್ನು ವಿವರಿಸುತ್ತಾ ಹೇಳುತ್ತಾನೆ.. ನಿಮಗೆ ಈ ತಿಂಗಳು ದೊರೆತಲ್ಲಿ ಇದರ ಉಪವಾಸವನ್ನು ಖಡ್ಡಾಯವಾಗಿ ನಿರ್ವಹಿಸಿ.(ಅಲ್ ಬಕರ:185) ಉಪವಾಸಕ್ಕೆ ಅರಬಿ ಭಾಷೆಯಲ್ಲಿ ಸಿಯಾಮ್ ಎಂದು ಕರೆಯುತ್ತೇವೆ. ಈ ಶಬ್ದದ ಅರ್ಥ “ನಿಲ್ಲಿಸಿ, ಕೊನೆಗೊಳಿಸಿ, ಅಂತ್ಯಗೊಳಿಸಿ” ಎಂದಾಗಿದೆ. ಹಾಗೂ ಶರೀಅತ್ ನಲ್ಲಿ ಬೆಳಗ್ಗಿನ ಜಾವದಿಂದ ಸೂರ್ಯಾಸ್ತಮಾನದ ವರೆಗೆ ಅನ್ನ ಪಾನೀಯಗಳನ್ನು ಸೇವಿಸುವುದರಿಂದ ಹಾಗೂ ಎಲ್ಲಾ ತರಹದ ದೈಹಿಕ ಆಸೆ ಆಕಾಂಕ್ಷೆಗಳಿಂದ ತನ್ನನ್ನು ತಡೆಯುವುದು, ದೂರವಿಡುವುದು ಎಂದಾಗಿದೆ.
ಅಲ್ಲಾಹನ ವಿವೇಚನಾತ್ಮಕ ಆದೇಶ :
ಹಾಗೆ ನೋಡುವುದಾದರೆ ಉಪವಾಸ ಒಂದು ಕಠಿಣವಾದ ದೈಹಿಕ ಶ್ರಮ ಎಂದು ನಮಗೆ ಕಂಡುಬರುತ್ತದೆ. ಅಲ್ಲಾಹನು ಇದನ್ನು ಸರಳಗೊಳಿಸಲು ಅತ್ಯಂತ ವಿವೇಚನಾತ್ಮಕವಾಗಿ ತನ್ನ ದಾಸರಿಗೆ ಹೇಳುತ್ತಾನೆ, ಉಪವಾಸವನ್ನು ನಿಮಗೆ ಕಡ್ಡಾಯಗೊಳಿಸಿದ್ದು ಇದೊಂದು ಹೊಸ ಆದೇಶವಲ್ಲ ಬದಲಾಗಿ ನಿಮಗಿಂತ ಮೊದಲು ಬಂದ ಎಲ್ಲಾ ಪ್ರವಾದಿಗಳ ಅನುಯಾಯಿಗಳ ಮೇಲೂ ಕಡ್ಡಾಯಗೊಳಿಸಲಾಗಿತ್ತು.
ಒಂದು ಕಾರ್ಯವನ್ನು ಸಾಮೂಹಿಕವಾಗಿ ನಿರ್ವಹಿಸುವಾಗ ಅದು ಎಷ್ಟೇ ಕಷ್ಟ ಎಂದು ಕಂಡು ಬಂದರೂ ಅದಕ್ಕೆ ನಾವು ಸುಲಭವಾಗಿ ಹೊಂದಿಕೊಂಡು ಹೋಗುತ್ತೇವೆ. ಇದೊಂದು ಸ್ವಾಭಾವಿಕ ವಿಷಯ. ಇದಕ್ಕಾಗಿಯೇ ಅಲ್ಲಾಹನು ಆದಿಪಿತ ಆದಮ್(ಅ.ಸ.) ರಿಂದ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ್ವ.ಸ್ವ.) ರ ವರೇಗೆ ಎಲ್ಲಾ ಪ್ರವಾದಿಗಳ ಅನುಯಾಯಿಗಳ ಮೇಲೂ ನಮಾಝ್ ಹಾಗೂ ಉಪವಾಸವನ್ನು ಕಡ್ಡಾಯಗೊಳಿಸಿದ್ದನು.
ಉಪವಾಸದ ಉದ್ದೇಶ :
ಉಪವಾಸವನ್ನು ಕಡ್ಡಾಯಗೊಳಿಸುವ ಜೊತೆಗೆ ಅಲ್ಲಾಹನು ಅತ್ಯಂತ ಸ್ಪಷ್ಟವಾಗಿ ಅದರ ಉದ್ದೇಶವನ್ನೂ ವಿವರಿಸುತ್ತಾ ಹೇಳುತ್ತಾನೆ, ಓ ಸತ್ಯ ವಿಶ್ವಾಸಿಗಳೇ, ನಿಮ್ಮ ಮೇಲೆ ಉಪವಾಸವನ್ನು ಕಡ್ಡಾಯಗೊಳಿಸಲಾಗಿದೆ ನಿಮಗಿಂತ ಮುಂಚಿನ ಉಮ್ಮತ್ (ಅನುಯಾಯಿಗಳು) ಗಳ ಮೇಲೆ ಕಡ್ಡಾಯಗೊಳಿಸಿದ ಹಾಗೆ, ನಿಮ್ಮಲ್ಲಿ ತಕ್ವಾ(ದೇವ ಭಕ್ತಿ) ಉಂಟು ಮಾಡಲಿಕ್ಕಾಗಿ.( ಕುರ್ ಆನ್:ಅಲ್ ಬಕರ:183) ಸೂಕ್ಷವಾಗಿ ಗಮನಿಸಿದರೆ, ನಮ್ಮಲ್ಲಿ ದೇವ ಭಕ್ತಿ ಉಂಟು ಮಾಡುವಲ್ಲಿ ಉಪವಾಸಕ್ಕೆ ವಿಶೇಷ ಮಹತ್ವವಿದೆ. ಅನ್ನ ಪಾನೀಯಗಳನ್ನು ಸೇವಿಸುವುದರಿಂದ ಹಾಗೂ ಮನುಷ್ಯನು ದೈಹಿಕ ಆಸೆ ಆಕಾಂಕ್ಷೆಗಳ ಗುಲಾಮನಾಗುವುದರಿಂದ ಖಂಡಿತವಾಗಿಯೂ ಆ ವಸ್ತುಗಳ ದಾಸನಾಗುತ್ತಾನೆ. ಇದರಿಂದ ದ್ವೇಷ, ಅಸೂಯೆ, ಕೋಪ, ದುರಹಂಕಾರ, ದೌರ್ಜನ್ಯ ಮುಂತಾದ ಹಲವು ಕೆಟ್ಟ ಗುಣಗಳು ಹುಟ್ಟಿಕೊಳ್ಳುತ್ತವೆ. ನಿರಂತರವಾದ ಒಂದು ತಿಂಗಳ ಉಪವಾಸವು ಎಲ್ಲಾ ತರಹದ ದುರ್ಗುಣಗಳಿಂದ ತನ್ನನ್ನು ಹತೋಟಿಯಲ್ಲಿಡಲು ಬಲು ಸಹಕಾರಿ. 

ಒಂದೇ ಸಮನೆ ಒಂದೇ ತರಹದ ಇಬಾದತ್ ಗಳನ್ನು ಮಾಡುವುದರಿಂದ ಧಾರ್ಮಿಕ ಚೌಕಟ್ಟಿನಲ್ಲಿದ್ದು, ತಕ್ವಾ(ದೇವಭಯ)ದ ಮೂಲಕ ಜೀವನ ನಡೆಸುವಂತಹ ಸೌಭಾಗ್ಯವನ್ನು ಅಲ್ಲಾಹನು ನೀಡುತ್ತಾನೆ. ಉಪವಾಸದ ಮೂಲಕ ಒಬ್ಬ ವ್ಯಕ್ತಿ, ಅನ್ನಪಾನೀಯಗಳನ್ನು ಸೇವಿಸುವುದು ಮುಂತಾದ ಧರ್ಮ ಸಮ್ಮತ ಕಾರ್ಯಗಳನ್ನು ಅಲ್ಲಾಹನ ಸಂಪ್ರೀತಿಗಾಗಿ ತ್ಯಜಿಸುವಾಗ ಧರ್ಮಸಮ್ಮತವಲ್ಲದ ಕಾರ್ಯಗಳಿಂದ ದೂರವಿರುವುದು ಅವನಿಗೆ ಸುಲಭವಾಗುತ್ತದೆ. ಇದೇ ನೈಜ ತಕ್ವಾ(ದೇವಭಯ). ಹಾಗೂ ಇದರಿಂದ ಸ್ವೇಚ್ಚಾಚಾರದಿಂದ ದೂರವಿದ್ದು ಅಲ್ಲಾಹನ ಆಜ್ಞಾನುಸಾರ ಜೀವನ ನಡೆಸುವಂತಹ ಅಪಾರ ಶಕ್ತಿ ನಮಗೆ ಲಭಿಸುತ್ತದೆ. ಒಂದು ತಿಂಗಳ ಉಪವಾಸದಿಂದ ಒಬ್ಬ ವ್ಯಕ್ತಿಯಲ್ಲಿ ಅಲ್ಲಾಹನನ್ನು ಭಯಪಡುವಂತಹ ವಿಶೇಷ ಗುಣ ಉಂಟಾದಲ್ಲಿ ಇಹಲೋಕದಲ್ಲಿಯೂ, ಪರಲೋಕದಲ್ಲಿಯೂ ಇದರ ಉತ್ತಮ ಪ್ರತಿಫಲ ಸಿಗುವುದು ಖಂಡಿತ. ಇದುವೇ ಉಪವಾಸದ ನೈಜ ಉದ್ದೇಶ.

ರಂಝಾನ್ ತಿಂಗಳು ಹಾಗೂ ಉಪವಾಸ : (ರಂಝಾನ್ ಸ್ಪೆಷಲ್)

 : ರಂಝಾನ್ ತಿಂಗಳು ಮುಸ್ಲಿಮರಿಗಾಗಿ ಅಲ್ಲಾಹನ ವತಿಯಿಂದ ದೊರೆಯುವ ಬಹು ದೊಡ್ಡ ಭಾಗ್ಯವಾಗಿದೆ. ಹಗಲಿರುಳು ಮನ ಮಸ್ತಿಷ್ಕಗಳಿಗೆ ವಿಶೇಷ ಶಾಂತಿಯನ್ನು ನೀಡುವಂತಹ ವಾತಾವರಣ ಅಲ್ಲಿರುತ್ತದೆ. ಪುಣ್ಯಗಳನ್ನು ಗಳಿಸಿ ಅಲ್ಲಾಹನ ಸಂತೃಪ್ತಿಯನ್ನು ಗಳಿಸುವವರಿಗೆ ಇದೊಂದು ಉತ್ತಮ ಅವಕಾಶ.
ಎಲ್ಲಾ ತರಹದ ಪುಣ್ಯ ಕಾರ್ಯಗಳಿಗೆ ಈ ತಿಂಗಳಿಗೆ ನೀಡಿದಂತಹ ವಿಶೇಷ ಮಹತ್ವ ಬೇರೆ ಯಾವ ತಿಂಗಳಿಗೂ ಅಲ್ಲಾಹನು ನೀಡಲಿಲ್ಲ. ಹಾಗೂ ಈ ತಿಂಗಳಲ್ಲಿ ಪುಣ್ಯ ಕಾರ್ಯಗಳಿಗೆ ಲಭಿಸುವ ಪ್ರತಿಫಲಗಳು ಬೇರೆ ಯಾವ ತಿಂಗಳಲ್ಲೂ ಲಭ್ಯವಿಲ್ಲ. ಎಲ್ಲಾ ತರಹದ ಸದ್ಗುಣ ಹಾಗೂ ಪುಣ್ಯ ಕಾರ್ಯಗಳಿಗೆ ಹೋಲಿಸಿದರೆ ರಮಝಾನ್ ತಿಂಗಳಿಗೆ ವಿಶೇಷವಾದ ಮಹತ್ವವಿದೆ. ಈ ತಿಂಗಳ ಉಪವಾಸವನ್ನು ಎಲ್ಲಾ ಪ್ರಾಯಪೂರ್ತಿಯಾದ ಮುಸ್ಲಿಮರ ಮೇಲೆ ಕಡ್ಡಾಯಗೊಳಿಸಲಾಗಿದೆ. ಅಲ್ಲಾಹನು ರಮಝಾನ್ ತಿಂಗಳಲ್ಲಿ ಉಪವಾಸ,ಇಫ್ತಾರ್,ಸಹರಿ, ತರಾವೀಹ್,ತಹಜ್ಜುದ್,ಇಅತಿಕಾಫ್,ಝಿಕ್ರ್, ಸದಕ(ಬಡವರಿಗೆ ಸಹಾಯ) ಮುಂತಾದ ವಿಶೇಷ ಇಬಾದತ್(ಪ್ರಾರ್ಥನೆ) ಗಳನ್ನು ಮಾಡುವ ಆದೇಶವನ್ನು ನೀಡುವ ಮೂಲಕ ಪ್ರವಾದಿ ಮುಹಮ್ಮದ್ ಮುಸ್ತಫಾ(ಸ್ವ.ಸ್ವ)ರವರ ಅನುಯಾಯಿಗಳ ಮೇಲೆ ವಿಶೇಷವಾದ ಕರುಣೆಯನ್ನು ತೋರಿದ್ದಾನೆ. ರಮಝಾನ್ ತಿಂಗಳ ಆಗಮನಕ್ಕಿಂತ ಮುಂಚೆ ಪ್ರವಾದಿ ಮುಹಮ್ಮದ್ (ಸ್ವ.ಸ್ವ) ರವರು ಇದನ್ನು ಸ್ವಾಗತಿಸುತ್ತಿದ್ದರು. ತನ್ನ ಅನುಯಾಯಿಗಳಾದ ಸ್ವಹಾಬಿಗಳಿಗೂ ವಿಶೇಷವಾಗಿ ಇದನ್ನು ಸ್ವಾಗತಿಸಲು ಕರೆ ನೀಡುತ್ತಿದ್ದರು.
ಪ್ರವಾದಿ(ಸ್ವ.ಸ್ವ) ಒಮ್ಮೆ ಸ್ವಹಾಬಿಗಳ ಮಜ್ಲಿಸ್ ನಲ್ಲಿ ಮಾತನಾಡುತ್ತಾ ನಿಮ್ಮನ್ನು ಯಾರು ಸ್ವಾಗತಿಸುತ್ತಿದ್ದಾರೆ ಹಾಗೂ ನೀವು ಯಾರನ್ನುಸ್ವಾಗತಿಸುತ್ತಿದ್ದೀರಿ ಎಂದು ಕೇಳಿದರು. ಆಗ ಉಮರ್ (ರ.ಅ.) ರವರು, ಪ್ರವಾದಿ (ಸ್ವ.ಸ್ವ.)ರವರೇ, ಏನು ತಮ್ಮ ಮೇಲೆ ವಹೀ(ದೇವವಾಣಿ) ಅವತೀರ್ಣವಾಗುತ್ತಿದೆಯೇ ಅಥವಾ ವೈರಿಗಳ ಜೊತೆ ಯುಧ್ಧ ನಡೆಯಲಿದೆಯೋ ಎಂದು ತನ್ನ ಮನಸ್ಸಿನ ಇಂಗಿತವನ್ನು ವ್ಯಕ್ತಪಡಿಸಿದರು. ಆಗ ಪ್ರವಾದಿ(ಸ್ವ.ಸ್ವ.) ರವರು ಇದನ್ನು ನಿರಾಕರಿಸುತ್ತಾ ಹೇಳಿದರು, ಪವಿತ್ರ ರಮಝಾನ್ ತಿಂಗಳ ಮೊದಲನೇ ರಾತ್ರಿಯಲ್ಲಿ ಅಲ್ಲಾಹನು ಪ್ರತಿಯೊಬ್ಬ ಸತ್ಯ ವಿಶ್ವಾಸಿಯ ದೋಷಗಳನ್ನು ಕ್ಷಮಿಸುತ್ತಾನೆ. ತನ್ಮೂಲಕ ಪವಿತ್ರ ತಿಂಗಳ ಆಗಮನದ ಮುಂಚೆ ಇದನ್ನು ಸ್ವಾಗತಿಸುವುದು ಪ್ರವಾದಿ(ಸ್ವ.ಸ್ವ) ಹಾಗೂ ಸ್ವಹಾಬಿಗಳ ಸುನ್ನತ್ (ಅನುಕರಣೆ) ಯಾಗಿದೆ. 


ಈ ತಿಂಗಳನ್ನು ಮೂರು ವಿಧವಾಗಿ ವಿಂಗಡಿಸಲಾಗಿದೆ.1) ರಹ್ ಮತ್(ಕರುಣೆ) 2)ಮಗ್ಫಿರತ್(ಕ್ಷಮೆ) 3) ಇತ್ಕ್ ಮಿನನ್ನಾರ್(ನರಕದ ಅಗ್ನಿಯಿಂದ ರಕ್ಷಣೆ). ಸಲ್ಮಾನ್(ರ.ಅ.)ರವರಿಂದ ವರದಿಯಾಗಿದೆ. ಪ್ರವಾದಿ(ಸ್ವ.ಸ್ವ.) ರವರು ಶಅಬಾನ್ ತಿಂಗಳ ಕೊನೆಯಲ್ಲಿ ನಮ್ಮನ್ನು ಉದ್ದೇಶಿಸುತ್ತಾ ರಮಝಾನ್ ತಿಂಗಳ ಮಹತ್ವವನ್ನು ವಿವರಿಸುತ್ತಾ, ಇದರ ಮೊದಲಿನ ಭಾಗ ರಹ್ ಮತ್ ಮಧ್ಯ ಭಾಗ ಮಗ್ಫಿರತ್ ಹಾಗೂ ಕೊನೆಯ ಭಾಗ ನರಕದ ಅಗ್ನಿಯಿಂದ ರಕ್ಷಣೆ ಎಂದು ಹೇಳಿದರು.(ವರದಿ: ಸಹೀಹ್ ಇಬ್ನ್ ಖುಝೈಮಾ)