Wednesday, 2 July 2014

ಉಪವಾಸದ ಅರ್ಥ : (ರಂಝಾನ್ ಸ್ಪೆಷಲ್)

(ವಿಶ್ವ ಕನ್ನಡಿಗ ನ್ಯೂಸ್) : ಪವಿತ್ರ ಕುರ್ ಆನಿನ ಎರಡನೇ ಅಧ್ಯಾಯದಲ್ಲಿ ಅಲ್ಲಾಹನು ರಮಝಾನ್ ತಿಂಗಳ ಉಪವಾಸದ ಮಹತ್ವವನ್ನು ವಿವರಿಸುತ್ತಾ ಹೇಳುತ್ತಾನೆ.. ನಿಮಗೆ ಈ ತಿಂಗಳು ದೊರೆತಲ್ಲಿ ಇದರ ಉಪವಾಸವನ್ನು ಖಡ್ಡಾಯವಾಗಿ ನಿರ್ವಹಿಸಿ.(ಅಲ್ ಬಕರ:185) ಉಪವಾಸಕ್ಕೆ ಅರಬಿ ಭಾಷೆಯಲ್ಲಿ ಸಿಯಾಮ್ ಎಂದು ಕರೆಯುತ್ತೇವೆ. ಈ ಶಬ್ದದ ಅರ್ಥ “ನಿಲ್ಲಿಸಿ, ಕೊನೆಗೊಳಿಸಿ, ಅಂತ್ಯಗೊಳಿಸಿ” ಎಂದಾಗಿದೆ. ಹಾಗೂ ಶರೀಅತ್ ನಲ್ಲಿ ಬೆಳಗ್ಗಿನ ಜಾವದಿಂದ ಸೂರ್ಯಾಸ್ತಮಾನದ ವರೆಗೆ ಅನ್ನ ಪಾನೀಯಗಳನ್ನು ಸೇವಿಸುವುದರಿಂದ ಹಾಗೂ ಎಲ್ಲಾ ತರಹದ ದೈಹಿಕ ಆಸೆ ಆಕಾಂಕ್ಷೆಗಳಿಂದ ತನ್ನನ್ನು ತಡೆಯುವುದು, ದೂರವಿಡುವುದು ಎಂದಾಗಿದೆ.
ಅಲ್ಲಾಹನ ವಿವೇಚನಾತ್ಮಕ ಆದೇಶ :
ಹಾಗೆ ನೋಡುವುದಾದರೆ ಉಪವಾಸ ಒಂದು ಕಠಿಣವಾದ ದೈಹಿಕ ಶ್ರಮ ಎಂದು ನಮಗೆ ಕಂಡುಬರುತ್ತದೆ. ಅಲ್ಲಾಹನು ಇದನ್ನು ಸರಳಗೊಳಿಸಲು ಅತ್ಯಂತ ವಿವೇಚನಾತ್ಮಕವಾಗಿ ತನ್ನ ದಾಸರಿಗೆ ಹೇಳುತ್ತಾನೆ, ಉಪವಾಸವನ್ನು ನಿಮಗೆ ಕಡ್ಡಾಯಗೊಳಿಸಿದ್ದು ಇದೊಂದು ಹೊಸ ಆದೇಶವಲ್ಲ ಬದಲಾಗಿ ನಿಮಗಿಂತ ಮೊದಲು ಬಂದ ಎಲ್ಲಾ ಪ್ರವಾದಿಗಳ ಅನುಯಾಯಿಗಳ ಮೇಲೂ ಕಡ್ಡಾಯಗೊಳಿಸಲಾಗಿತ್ತು.
ಒಂದು ಕಾರ್ಯವನ್ನು ಸಾಮೂಹಿಕವಾಗಿ ನಿರ್ವಹಿಸುವಾಗ ಅದು ಎಷ್ಟೇ ಕಷ್ಟ ಎಂದು ಕಂಡು ಬಂದರೂ ಅದಕ್ಕೆ ನಾವು ಸುಲಭವಾಗಿ ಹೊಂದಿಕೊಂಡು ಹೋಗುತ್ತೇವೆ. ಇದೊಂದು ಸ್ವಾಭಾವಿಕ ವಿಷಯ. ಇದಕ್ಕಾಗಿಯೇ ಅಲ್ಲಾಹನು ಆದಿಪಿತ ಆದಮ್(ಅ.ಸ.) ರಿಂದ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ್ವ.ಸ್ವ.) ರ ವರೇಗೆ ಎಲ್ಲಾ ಪ್ರವಾದಿಗಳ ಅನುಯಾಯಿಗಳ ಮೇಲೂ ನಮಾಝ್ ಹಾಗೂ ಉಪವಾಸವನ್ನು ಕಡ್ಡಾಯಗೊಳಿಸಿದ್ದನು.
ಉಪವಾಸದ ಉದ್ದೇಶ :
ಉಪವಾಸವನ್ನು ಕಡ್ಡಾಯಗೊಳಿಸುವ ಜೊತೆಗೆ ಅಲ್ಲಾಹನು ಅತ್ಯಂತ ಸ್ಪಷ್ಟವಾಗಿ ಅದರ ಉದ್ದೇಶವನ್ನೂ ವಿವರಿಸುತ್ತಾ ಹೇಳುತ್ತಾನೆ, ಓ ಸತ್ಯ ವಿಶ್ವಾಸಿಗಳೇ, ನಿಮ್ಮ ಮೇಲೆ ಉಪವಾಸವನ್ನು ಕಡ್ಡಾಯಗೊಳಿಸಲಾಗಿದೆ ನಿಮಗಿಂತ ಮುಂಚಿನ ಉಮ್ಮತ್ (ಅನುಯಾಯಿಗಳು) ಗಳ ಮೇಲೆ ಕಡ್ಡಾಯಗೊಳಿಸಿದ ಹಾಗೆ, ನಿಮ್ಮಲ್ಲಿ ತಕ್ವಾ(ದೇವ ಭಕ್ತಿ) ಉಂಟು ಮಾಡಲಿಕ್ಕಾಗಿ.( ಕುರ್ ಆನ್:ಅಲ್ ಬಕರ:183) ಸೂಕ್ಷವಾಗಿ ಗಮನಿಸಿದರೆ, ನಮ್ಮಲ್ಲಿ ದೇವ ಭಕ್ತಿ ಉಂಟು ಮಾಡುವಲ್ಲಿ ಉಪವಾಸಕ್ಕೆ ವಿಶೇಷ ಮಹತ್ವವಿದೆ. ಅನ್ನ ಪಾನೀಯಗಳನ್ನು ಸೇವಿಸುವುದರಿಂದ ಹಾಗೂ ಮನುಷ್ಯನು ದೈಹಿಕ ಆಸೆ ಆಕಾಂಕ್ಷೆಗಳ ಗುಲಾಮನಾಗುವುದರಿಂದ ಖಂಡಿತವಾಗಿಯೂ ಆ ವಸ್ತುಗಳ ದಾಸನಾಗುತ್ತಾನೆ. ಇದರಿಂದ ದ್ವೇಷ, ಅಸೂಯೆ, ಕೋಪ, ದುರಹಂಕಾರ, ದೌರ್ಜನ್ಯ ಮುಂತಾದ ಹಲವು ಕೆಟ್ಟ ಗುಣಗಳು ಹುಟ್ಟಿಕೊಳ್ಳುತ್ತವೆ. ನಿರಂತರವಾದ ಒಂದು ತಿಂಗಳ ಉಪವಾಸವು ಎಲ್ಲಾ ತರಹದ ದುರ್ಗುಣಗಳಿಂದ ತನ್ನನ್ನು ಹತೋಟಿಯಲ್ಲಿಡಲು ಬಲು ಸಹಕಾರಿ. 

ಒಂದೇ ಸಮನೆ ಒಂದೇ ತರಹದ ಇಬಾದತ್ ಗಳನ್ನು ಮಾಡುವುದರಿಂದ ಧಾರ್ಮಿಕ ಚೌಕಟ್ಟಿನಲ್ಲಿದ್ದು, ತಕ್ವಾ(ದೇವಭಯ)ದ ಮೂಲಕ ಜೀವನ ನಡೆಸುವಂತಹ ಸೌಭಾಗ್ಯವನ್ನು ಅಲ್ಲಾಹನು ನೀಡುತ್ತಾನೆ. ಉಪವಾಸದ ಮೂಲಕ ಒಬ್ಬ ವ್ಯಕ್ತಿ, ಅನ್ನಪಾನೀಯಗಳನ್ನು ಸೇವಿಸುವುದು ಮುಂತಾದ ಧರ್ಮ ಸಮ್ಮತ ಕಾರ್ಯಗಳನ್ನು ಅಲ್ಲಾಹನ ಸಂಪ್ರೀತಿಗಾಗಿ ತ್ಯಜಿಸುವಾಗ ಧರ್ಮಸಮ್ಮತವಲ್ಲದ ಕಾರ್ಯಗಳಿಂದ ದೂರವಿರುವುದು ಅವನಿಗೆ ಸುಲಭವಾಗುತ್ತದೆ. ಇದೇ ನೈಜ ತಕ್ವಾ(ದೇವಭಯ). ಹಾಗೂ ಇದರಿಂದ ಸ್ವೇಚ್ಚಾಚಾರದಿಂದ ದೂರವಿದ್ದು ಅಲ್ಲಾಹನ ಆಜ್ಞಾನುಸಾರ ಜೀವನ ನಡೆಸುವಂತಹ ಅಪಾರ ಶಕ್ತಿ ನಮಗೆ ಲಭಿಸುತ್ತದೆ. ಒಂದು ತಿಂಗಳ ಉಪವಾಸದಿಂದ ಒಬ್ಬ ವ್ಯಕ್ತಿಯಲ್ಲಿ ಅಲ್ಲಾಹನನ್ನು ಭಯಪಡುವಂತಹ ವಿಶೇಷ ಗುಣ ಉಂಟಾದಲ್ಲಿ ಇಹಲೋಕದಲ್ಲಿಯೂ, ಪರಲೋಕದಲ್ಲಿಯೂ ಇದರ ಉತ್ತಮ ಪ್ರತಿಫಲ ಸಿಗುವುದು ಖಂಡಿತ. ಇದುವೇ ಉಪವಾಸದ ನೈಜ ಉದ್ದೇಶ.

No comments:

Post a Comment