ರಂಝಾನ್ ತಿಂಗಳು ಹಾಗೂ ಉಪವಾಸ : (ರಂಝಾನ್ ಸ್ಪೆಷಲ್)
: ರಂಝಾನ್ ತಿಂಗಳು ಮುಸ್ಲಿಮರಿಗಾಗಿ ಅಲ್ಲಾಹನ ವತಿಯಿಂದ ದೊರೆಯುವ ಬಹು ದೊಡ್ಡ ಭಾಗ್ಯವಾಗಿದೆ. ಹಗಲಿರುಳು ಮನ ಮಸ್ತಿಷ್ಕಗಳಿಗೆ ವಿಶೇಷ ಶಾಂತಿಯನ್ನು ನೀಡುವಂತಹ ವಾತಾವರಣ ಅಲ್ಲಿರುತ್ತದೆ. ಪುಣ್ಯಗಳನ್ನು ಗಳಿಸಿ ಅಲ್ಲಾಹನ ಸಂತೃಪ್ತಿಯನ್ನು ಗಳಿಸುವವರಿಗೆ ಇದೊಂದು ಉತ್ತಮ ಅವಕಾಶ.
ಎಲ್ಲಾ ತರಹದ ಪುಣ್ಯ ಕಾರ್ಯಗಳಿಗೆ ಈ ತಿಂಗಳಿಗೆ ನೀಡಿದಂತಹ ವಿಶೇಷ ಮಹತ್ವ ಬೇರೆ ಯಾವ ತಿಂಗಳಿಗೂ ಅಲ್ಲಾಹನು ನೀಡಲಿಲ್ಲ. ಹಾಗೂ ಈ ತಿಂಗಳಲ್ಲಿ ಪುಣ್ಯ ಕಾರ್ಯಗಳಿಗೆ ಲಭಿಸುವ ಪ್ರತಿಫಲಗಳು ಬೇರೆ ಯಾವ ತಿಂಗಳಲ್ಲೂ ಲಭ್ಯವಿಲ್ಲ. ಎಲ್ಲಾ ತರಹದ ಸದ್ಗುಣ ಹಾಗೂ ಪುಣ್ಯ ಕಾರ್ಯಗಳಿಗೆ ಹೋಲಿಸಿದರೆ ರಮಝಾನ್ ತಿಂಗಳಿಗೆ ವಿಶೇಷವಾದ ಮಹತ್ವವಿದೆ. ಈ ತಿಂಗಳ ಉಪವಾಸವನ್ನು ಎಲ್ಲಾ ಪ್ರಾಯಪೂರ್ತಿಯಾದ ಮುಸ್ಲಿಮರ ಮೇಲೆ ಕಡ್ಡಾಯಗೊಳಿಸಲಾಗಿದೆ. ಅಲ್ಲಾಹನು ರಮಝಾನ್ ತಿಂಗಳಲ್ಲಿ ಉಪವಾಸ,ಇಫ್ತಾರ್,ಸಹರಿ, ತರಾವೀಹ್,ತಹಜ್ಜುದ್,ಇಅತಿಕಾಫ್,ಝಿಕ್ರ್, ಸದಕ(ಬಡವರಿಗೆ ಸಹಾಯ) ಮುಂತಾದ ವಿಶೇಷ ಇಬಾದತ್(ಪ್ರಾರ್ಥನೆ) ಗಳನ್ನು ಮಾಡುವ ಆದೇಶವನ್ನು ನೀಡುವ ಮೂಲಕ ಪ್ರವಾದಿ ಮುಹಮ್ಮದ್ ಮುಸ್ತಫಾ(ಸ್ವ.ಸ್ವ)ರವರ ಅನುಯಾಯಿಗಳ ಮೇಲೆ ವಿಶೇಷವಾದ ಕರುಣೆಯನ್ನು ತೋರಿದ್ದಾನೆ. ರಮಝಾನ್ ತಿಂಗಳ ಆಗಮನಕ್ಕಿಂತ ಮುಂಚೆ ಪ್ರವಾದಿ ಮುಹಮ್ಮದ್ (ಸ್ವ.ಸ್ವ) ರವರು ಇದನ್ನು ಸ್ವಾಗತಿಸುತ್ತಿದ್ದರು. ತನ್ನ ಅನುಯಾಯಿಗಳಾದ ಸ್ವಹಾಬಿಗಳಿಗೂ ವಿಶೇಷವಾಗಿ ಇದನ್ನು ಸ್ವಾಗತಿಸಲು ಕರೆ ನೀಡುತ್ತಿದ್ದರು.
ಪ್ರವಾದಿ(ಸ್ವ.ಸ್ವ) ಒಮ್ಮೆ ಸ್ವಹಾಬಿಗಳ ಮಜ್ಲಿಸ್ ನಲ್ಲಿ ಮಾತನಾಡುತ್ತಾ ನಿಮ್ಮನ್ನು ಯಾರು ಸ್ವಾಗತಿಸುತ್ತಿದ್ದಾರೆ ಹಾಗೂ ನೀವು ಯಾರನ್ನುಸ್ವಾಗತಿಸುತ್ತಿದ್ದೀರಿ ಎಂದು ಕೇಳಿದರು. ಆಗ ಉಮರ್ (ರ.ಅ.) ರವರು, ಪ್ರವಾದಿ (ಸ್ವ.ಸ್ವ.)ರವರೇ, ಏನು ತಮ್ಮ ಮೇಲೆ ವಹೀ(ದೇವವಾಣಿ) ಅವತೀರ್ಣವಾಗುತ್ತಿದೆಯೇ ಅಥವಾ ವೈರಿಗಳ ಜೊತೆ ಯುಧ್ಧ ನಡೆಯಲಿದೆಯೋ ಎಂದು ತನ್ನ ಮನಸ್ಸಿನ ಇಂಗಿತವನ್ನು ವ್ಯಕ್ತಪಡಿಸಿದರು. ಆಗ ಪ್ರವಾದಿ(ಸ್ವ.ಸ್ವ.) ರವರು ಇದನ್ನು ನಿರಾಕರಿಸುತ್ತಾ ಹೇಳಿದರು, ಪವಿತ್ರ ರಮಝಾನ್ ತಿಂಗಳ ಮೊದಲನೇ ರಾತ್ರಿಯಲ್ಲಿ ಅಲ್ಲಾಹನು ಪ್ರತಿಯೊಬ್ಬ ಸತ್ಯ ವಿಶ್ವಾಸಿಯ ದೋಷಗಳನ್ನು ಕ್ಷಮಿಸುತ್ತಾನೆ. ತನ್ಮೂಲಕ ಪವಿತ್ರ ತಿಂಗಳ ಆಗಮನದ ಮುಂಚೆ ಇದನ್ನು ಸ್ವಾಗತಿಸುವುದು ಪ್ರವಾದಿ(ಸ್ವ.ಸ್ವ) ಹಾಗೂ ಸ್ವಹಾಬಿಗಳ ಸುನ್ನತ್ (ಅನುಕರಣೆ) ಯಾಗಿದೆ.
ಈ ತಿಂಗಳನ್ನು ಮೂರು ವಿಧವಾಗಿ ವಿಂಗಡಿಸಲಾಗಿದೆ.1) ರಹ್ ಮತ್(ಕರುಣೆ) 2)ಮಗ್ಫಿರತ್(ಕ್ಷಮೆ) 3) ಇತ್ಕ್ ಮಿನನ್ನಾರ್(ನರಕದ ಅಗ್ನಿಯಿಂದ ರಕ್ಷಣೆ). ಸಲ್ಮಾನ್(ರ.ಅ.)ರವರಿಂದ ವರದಿಯಾಗಿದೆ. ಪ್ರವಾದಿ(ಸ್ವ.ಸ್ವ.) ರವರು ಶಅಬಾನ್ ತಿಂಗಳ ಕೊನೆಯಲ್ಲಿ ನಮ್ಮನ್ನು ಉದ್ದೇಶಿಸುತ್ತಾ ರಮಝಾನ್ ತಿಂಗಳ ಮಹತ್ವವನ್ನು ವಿವರಿಸುತ್ತಾ, ಇದರ ಮೊದಲಿನ ಭಾಗ ರಹ್ ಮತ್ ಮಧ್ಯ ಭಾಗ ಮಗ್ಫಿರತ್ ಹಾಗೂ ಕೊನೆಯ ಭಾಗ ನರಕದ ಅಗ್ನಿಯಿಂದ ರಕ್ಷಣೆ ಎಂದು ಹೇಳಿದರು.(ವರದಿ: ಸಹೀಹ್ ಇಬ್ನ್ ಖುಝೈಮಾ)
No comments:
Post a Comment