Monday, 29 June 2015

ಕೆಡುಕು ಮುಕ್ತ ಸಮಾಜ ಮತ್ತು ರಮಝಾನ್




ಸುಳ್ಳಾಡುವುದು ಮನುಷ್ಯನ ಬಹು ದೊಡ್ಡ ದೌರ್ಬಲ್ಯವಾಗಿದೆ. ಇದರ ದುಷ್ಪರಿಣಾಮ ಸುಳ್ಳು ಹೇಳುವವನಿಗೆ ಮಾತ್ರವಲ್ಲ, ಸಮಾಜದ ಮೇಲೂ ಬೀಳುತ್ತದೆ. ಇದು ಕೆಡುಕುಗಳಲ್ಲಿ ಅತ್ಯಂತ ಪ್ರಭಾವಶಾಲಿ ಕೆಡುಕು. ಒಬ್ಬ ವ್ಯಕ್ತಿಯು ಸುಳ್ಳನ್ನು ತ್ಯಜಿಸಿದಲ್ಲಿ ಎಲ್ಲಾ ಕೆಡುಕುಗಳಿಂದ ಮುಕ್ತರಾಗಲು ಸಾಧ್ಯವಿದೆ ಎಂಬುದು ಪ್ರವಾದಿ ಮುಹಮ್ಮದ್ ಮುಸ್ತಫಾ(ಸ್ವ.ಅ) ರವರ ಶಿಕ್ಷಣವಾಗಿದೆ.
          ರಂಝಾನ್ ತಿಂಗಳ ಉಪವಾಸವಿದ್ದವನು ಸುಳ್ಳಾಡುವುದನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ಪ್ರವಾದಿಯವರು ವಿಶೇಷವಾಗಿ ಒತ್ತು ಕೊಟ್ಟು ಹೇಳಿದ್ದಾರೆ. “ ಒಬ್ಬನು ಸುಳ್ಳಾಡುವುದನ್ನು , ಸುಳ್ಳು ವ್ಯವಹಾರ ಮಾಡುವುದನ್ನು ಬಿಡದಿದ್ದರೆ ಅವನು ಆಹಾರ ಪಾನೀಯಗಳನ್ನು ಬಿಡಬೇಕೆಂಬ ಅಪೇಕ್ಷೆ ಅಲ್ಲಾಹನಿಗೆ ಇಲ್ಲವೇ ಇಲ್ಲ” (ಹದೀಸ್).
          ಮನುಷ್ಯನ ಇನ್ನೊಂದು ದೌರ್ಬಲ್ಯ ಅಸಹನೆ. ಪರಸ್ಪರ ಹಗೆತನ, ಅಸಹಕಾರ, ಮತ್ಸರ, ಕ್ರೋಧ, ಪ್ರತೀಕಾರ ಮನೋಭಾವ, ಸಂಘರ್ಷ ಮುಂತಾದ ಹಲವು ಕೆಡುಕುಗಳಿಗೆ ಅಸಹನೆಯು ಪ್ರೇರಣೆಯಾಗಿದೆ. ಒಂದು ತಿಂಗಳ ಉಪವಾಸವು ಸತ್ಯವಿಶ್ವಾಸಿಯನ್ನು ಈ ಕೆಡುಕುಗಳಿಂದ ತನ್ನನ್ನು ದೂರೀಕರಿಸಲು ಬಲು ಸಹಕಾರಿ. ಆದ್ದರಿಂದಲೇ ಪ್ರವಾದಿ ಮುಹಮ್ಮದ್ (ಸ್ವ.ಅ) ರವರು ಹೇಳಿರುವುದು. “ ಉಪವಾಸವಿರುವವನು ಜಗಳ, ಗಲಾಟೆಗಳಿಂದ ದೂರವಿರಬೇಕು. ಆತನನ್ನು ಯಾರಾದರೂ ಬೈದರೆ ಅಥವಾ ಅವನೊಡನೆ ಜಗಳಕ್ಕೆ ಬಂದರೆ, ಸಹೊದರಾ, ನಾನು ಉಪವಾಸವಿದ್ದೇನೆ ಎಂದು ಹೇಳಿ ತಪ್ಪಿಸಿಕೊಳ್ಳಬೇಕು.(ಹದೀಸ್)
ಇಂದು ಜಗತ್ತಿನಾದ್ಯಂತ ನಡೆಯುವ ನಾನಾ ತರಹದ ಸಂಘರ್ಷಗಳಿಗೆ ಮೂಲ ಕಾರಣ ಅಸಹನೆ. ಇದಕ್ಕಾಗಿಯೇ ಪ್ರವಾದಿಯವರು ಒಬ್ಬ ಸತ್ಯವಿಶ್ವಾಸಿಯ ಉಪವಾಸವು ಬರೇ ಅನ್ನ ಪಾನೀಯಗಳನ್ನು ತೊರೆಯುವುದಕ್ಕಾಗಿಯೇ ಸೀಮಿತವಾಗಿರಬಾರದು ಬದಲಾಗಿ ಅವನಲ್ಲಿ ಸಹಾನಾಶೀಲತೆಯು ಜಾಗೃತಗೊಳ್ಳಬೇಕು ಎಂದು ಹೇಳಿರುವುದು.
ಪ್ರವಾದಿ (ಸ್ವ.ಅ) ರವರು ತೋರಿಸಿ ಕೊಟ್ಟ ತರಬೇತಿಗಳ ಮೂಲಕ ನಿರಂತರ ಒಂದು ತಿಂಗಳ ಉಪವಾಸವನ್ನು ಆಚರಿಸಿದ್ದಲ್ಲಿ ಅದೊಂದು ಅಭ್ಯಾಸವಾಗಿ ಮಾರ್ಪಡುತ್ತದೆ ಎಂಬುದು ಧೃಢ ಸತ್ಯ. ಅಲ್ಲಾಹನ ಆದೇಶಗಳ ಪಾಲನೆ, ದೈಹಿಕವಾದ ಎಲ್ಲಾ ಕೆಡುಕುಗಳಿಂದ ತನ್ನನ್ನು ಮುಕ್ತಗೊಳಿಸಿ, ಅವನ ದಾಸರೊಂದಿಗೆ ಉತ್ತಮ ಭಾಂಧವ್ಯವು ಬೆಳೆಸಬೇಕು. ಇದರ ಮೂಲಕ ಅದೆಂತಹ ಪರಿಣಾಮಕಾರಿ ಸಮಾಜವನ್ನು ನಾವು ನೋಡಲು ಸಾಧ್ಯ ಎಂದು ಚಿಂತಿಸಲಿಕ್ಕೆ ನಮ್ಮ ಮುಂದಿರುವ ರಮಝಾನ್ ತಿಂಗಳು ಸಕಾಲ.
ವಿಶ್ವದಲ್ಲಿ ನಡೆಯುತ್ತಿರುವ ಅನಾಗರಿಕ ಕೋಮು ಗಲಭೆಗಳು ಇಲ್ಲದಾಗಬಹುದು. ಹೆಣ್ಣಿನ ಮೇಲಿನ ದೌರ್ಜನ್ಯಗಳು ಅಳಿಸಿ ಹೋಗಬಹುದು. ಅತ್ಯಾಚಾರದಂತಹ ಕೆಡುಕುಗಳಿಂದ ಸಮಾಜವು ಮುಕ್ತವಾಗಬಹುದು. ಪ್ರಬಲರ ಹಾಗೂ ದುರ್ಬಲರ ನಡುವಿನ ಸಂಘರ್ಷಗಳು ನಡೆಯಲಾರದು. ಕುಟುಂಬ ಕಲಹಗಳು ಒಳಜಗಳಗಳು ಇಲ್ಲದಾಗಬಹುದು. ವರದಕ್ಷಿಣೆಯಂತಹ ಮಹಾಮಾರಿಗೆ ಅಂತ್ಯ ಹಾಡಬಹುದು. ಛಿದ್ರವಾದಂತಹ ಕುಟುಂಬಗಳನ್ನು ಒಗ್ಗೂಡಿಸಬಹುದು. ಹೆಣ್ಣು ಹುಟ್ಟಿದಲ್ಲಿ ಅದನ್ನು ಕುಟುಂಬದ ಕಣ್ಣಾಗಿ ಕಾಣುವ ವಾತಾವರಣವನ್ನು ನಿರ್ಮಿಸಬಹುದು. ಹುಟ್ಟುವ ಮಗು ಹೆಣ್ಣು ಎಂದಾಕ್ಷಣ ಅದನ್ನು ಕೊಲ್ಲುವಂತಹ ಅನಾಗರಿಕ ಪದ್ಧತಿಯು ನಿಲ್ಲಬಹುದು. ಸಂಕಷ್ಟಗಳಿಗೆ ಸಹಾಯ ಮಾಡುವಂತಹ ಉದಾತ್ತ ಗುಣವನ್ನು ಹೊಂದಬಹುದು. ದಾನ ದರ್ಮಗಳ ಮೂಲಕ ಕಿತ್ತು ತಿನ್ನುವ ಬಡತನವನ್ನು ಸಮಾಜದಿಂದ ಕೊನೆಗೊಳಿಸಬಹುದು. ಹೆಣ್ಣು ಯಾವುದೇ ಭಯವಿಲ್ಲದೇ ಸಂಚರಿಸುವಂತಹ ಉತ್ತಮ ಸಮಾಜ ನಿರ್ಮಾಣವಾಗಬಹುದು. ಇಷ್ಟೇ ಅಲ್ಲ, ಅದೆಷ್ಟೋ ಕೆಡುಕುಗಳನ್ನು ನಿರ್ಮೂಲನೆ ಮಾಡುವಂತಹ ಪ್ರೇರಣಾ ಶಕ್ತಿಯನ್ನು ಪವಿತ್ರ ರಮಝಾನ್ ತಿಂಗಳು ಹೊಂದಿದೆ. ಇಂತಹ ಭಯಮುಕ್ತ ಸಮಾಜವನ್ನು ನಿರ್ಮಾಣ ಮಾಡಿ ಪ್ರತಿಯೊಬ್ಬರಲ್ಲಿಯೂ ತಕ್ವಾ (ದೇವಭಯ) ವನ್ನು ಜಾಗೃತಗೊಳಿಸುವ ರಮಝಾನ್ ಮಾಸವು ಇದೋ ನಮ್ಮ ಮುಂದಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳೋಣ. ನಿರಂತರವಾದ ತರಬೇತಿಗಳ ಮೂಲಕ ಪ್ರತಿಯೊಬ್ಬರಲ್ಲಿಯೂ ಅಲ್ಲಾಹನ ಭಯ ಜಾಗೃತಗೊಳಿಸುವಂತಹ ಸಮಾಜವನ್ನು ನಿರ್ಮಾಣ ಮಾಡುವ ಪ್ರತಿಜ್ಞೆಗೈಯ್ಯೋಣ. ಅಲ್ಲಾಹು ಆ ತೌಫೀಕ್ ನಮಗೆಲ್ಲರಿಗೂ ನೀಡಲಿ (ಆಮೀನ್)
ಲೇಖನ : ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ.

No comments:

Post a Comment