ಉಪವಾಸ ಹಾಗೂ ಸತ್ಯ ವಿಶ್ವಾಸಿಯ ಆಹಾರ ಶೈಲಿ : (ರಂಝಾನ್ ಸ್ಪೆಷಲ್)
(ವಿಶ್ವ ಕನ್ನಡಿಗ ನ್ಯೂಸ್) : ಮಿಕ್ ದಾದ್ ಬಿನ್ ಮಅದಿ ಕರಬ್ ರಿಂದ ವರದಿ: ಪ್ರವಾದಿವರ್ಯರು(ಸ) ಹೇಳುವುದನ್ನು ನಾನು ಕೇಳಿದ್ದೇನೆ: ಹೊಟ್ಟೆಗಿಂತ ಕೆಟ್ಟ ಪಾತ್ರೆಯನ್ನು ಮಾನವನು ತುಂಬಿಸಿಲ್ಲ. ಮಾನವ ಪುತ್ರನಿಗೆ ಅವನ ಬೆನ್ನೆಲುಬನ್ನು ನೇರ ನಿಲ್ಲಿಸಲು ಕೆಲವು ತುತ್ತುಗಳೇ ಸಾಕು. ಅದಕ್ಕಿಂತ ಹೆಚ್ಚು ಬೇಕೇ ಬೇಕೆಂದಾದರೆ, ಹೊಟ್ಟೆಯ 3/1 ಭಾಗ ಆಹಾರಕ್ಕೆ, 3/1 ನೀರಿಗೆ ಮತ್ತು 3/1 ಉಸಿರಾಟಕ್ಕೆ ಮೀಸಲಿಡಲಿ (ತಿರ್ಮಿದಿ)
ಮಾನವ ಕುಲಕ್ಕೆ ಎಲ್ಲ ವಿಷಯಗಳಲ್ಲಿಯೂ ಮಾರ್ಗದರ್ಶನ ನೀಡುವ ಪವಿತ್ರ ಕುರ್ ಆನ್ ಮತ್ತು ಪ್ರವಾದಿ ಚರ್ಯೆಯು ಇಲ್ಲಿ ಈ ಹದೀಸ್ ನಲ್ಲಿ ಆರೋಗ್ಯಪೂರ್ಣ ಆಹಾರ ಶೈಲಿಯನ್ನು ಕಲಿಸುತ್ತಿದೆ. ಒಮ್ಮೆ ಆಲೋಚಿಸಿ ನೋಡಿ, ಪ್ರವಾದಿವರ್ಯರ(ಸ್ವ.ಸ್ವ.) ಈ ಆಹಾರ ಶೈಲಿಯನ್ನೇ ಆಧುನಿಕ ವೈದ್ಯ ಶಾಸ್ತ್ರವೂ ಮಾನವನಿಗೆ ಕಲಿಸುತ್ತಿದೆ. ಹಸಿವೆಯ ರೋಗಗಳಿಗಿಂತ ಹೆಚ್ಚಾಗಿ ಅಮಿತ ಆಹಾರದ ದುರಂತಗಳನ್ನು ಅನುಭವಿಸುತ್ತಿರುವ ಆಧುನಿಕ ಮಾನವ ಸಮೂಹಕ್ಕೆ ಪ್ರವಾದಿವರ್ಯರ(ಸ್ವ.ಸ್ವ.) ಈ ಮಾರ್ಗದರ್ಶನವು ಬಹಳ ಉಪಯುಕ್ತವಾಗಿದೆ.
ಆಹಾರವು ಜೀವರಕ್ಷಣೆಯ ಅನಿವಾರ್ಯ ಘಟಕ ಮತ್ತು ಆರೋಗ್ಯ ರಕ್ಷಣೆಯಲ್ಲಿ ಅದರ ಪಾತ್ರ ಪ್ರಧಾನ ಎಂದು ಎಲ್ಲರಿಗೂ ತಿಳಿದಿದೆ. ಆದ್ದರಿಂದಲೇ ಪವಿತ್ರ ಕುರ್ ಆನ್ ಮತ್ತು ಪ್ರವಾದಿ ಚರ್ಯೆಯು ಒಂದು ಶಾಸ್ತ್ರೀಯ ಆಹಾರ ಶೈಲಿಯನ್ನು ಕಲಿಸುತ್ತಿದೆ. ಮಾನವನ ಜಠರವನ್ನು ಕೆಡಿಸಿ, ದೇಹದ ಪ್ರಮುಖ ಅಂಗಾಗಳನ್ನು ಹಾನಿಗೊಳಿಸುವ ಅಮಿತ ಭೋಜನದ ಬಗ್ಗೆ ಕುರ್ ಆನ್ ಹೀಗೆ ಹೇಳಿದೆ: `ನೀವು ತಿನ್ನಿರಿ, ಕುಡಿಯಿರಿ, ಆದರೆ ಮಿತಿಮೀರಬೇಡಿರಿ. ಮಿತಿ ಮೀರುವವರನ್ನು ಅಲ್ಲಾಹನು ಮೆಚ್ಚುವುದಿಲ್ಲ.’ ಆಹಾರದ ನಿಯಮ-ನಿಷೇಧಗಳನ್ನು ನೋಡದೆ ಸಿಕ್ಕಾಪಟ್ಟೆ ತಿಂದು ಹೊಟ್ಟೆ ತುಂಬಿಸುವವರು ಮತ್ತು ತಮ್ಮ ಸಂಪತ್ತನ್ನು ಸಂಪೂರ್ಣವಾಗಿ ಆಹಾರಕ್ಕಾಗಿ ವ್ಯಯಿಸುವ ವಿನಾ ಜೀವನಕ್ಕೆ ಬೇರೆ ಯಾವುದೇ ಗುರಿಯಿಲ್ಲದವರನ್ನು ಕುರ್ ಆನ್ ಇಲ್ಲಿ ಎಚ್ಚರಿಕೆ ನೀಡಿದೆ. ಈ ವಚನದ ವಿವರಣೆಯಲ್ಲಿ ಇಬ್ನು ಕಸೀರ್ ಹೀಗೆ ಹೇಳಿದ್ದಾರೆ: `ಅಲ್ಲಾಹನು ವೈದ್ಯಕೀಯವನ್ನು ಸಂಪೂರ್ಣವಾಗಿ ಒಂದು ವಚನದ ತುಣುಕಿನಲ್ಲಿ ಸೇರಿಸಿದ್ದಾನೆ. ಇದು ಪವಿತ್ರ ಕುರ್ ಆನ್ ನಲ್ಲಿ ವೈದ್ಯ ಶಾಸ್ತ್ರಕ್ಕೆ ಸಂಬಂಧಿಸಿದ ಪ್ರಮುಖ ವಚನವೂ ಆಗಿದೆ.
ಪ್ರವಾದಿವರ್ಯರು(ಸ್ವ.ಸ್ವ.) ಅತಿಭೋಜನದ ಅಪಾ ಯದ ಬಗ್ಗೆ ಹಲವು ಬಾರಿ ಸೂಚಿಸಿದ್ದಾರೆ. ಹೊಟ್ಟೆ ತುಂಬಿಸುವ ಬಗ್ಗೆ ನೀವು ಎಚ್ಚರವಹಿಸಿರಿ, ಯಾಕೆಂದರೆ ಹೊಟ್ಟೆ ತುಂಬಿಸುವಿಕೆಯು ದೇಹವನ್ನು ಕೆಡಿಸಿ ರೋಗವನ್ನು ಆಮಂತ್ರಿಸಿ, ನಮಾಝ್ನಿಂ ದ ಉದಾಸೀನಗೊಳಿಸುತ್ತದೆ. ಆದ್ದರಿಂದ ನೀವು ಮಿತ ಆಹಾರ ಸೇವಿಸುವಿರಾಗಿ.’ ಅತಿಭೋಜನವನ್ನು ತೊರೆಯುವುದರಿಂದ ನಮಗೆ ಆರೋಗ್ಯಪೂರ್ಣ ದೇಹದೊಂದಿಗೆ ದೃಢ ಮನಸ್ಸನ್ನೂ ಪಡೆಯಬಹುದೆಂದು ಈ ಪ್ರವಾದಿ ವಚನದಿಂದ ಗ್ರಹಿಸಬಹುದು. ಯಾಕೆಂದರೆ ಅಮಿತ ಆಹಾರವು ದೇಹವನ್ನು ಕೆಡಿಸುವುದರೊಂದಿಗೆ ನಮಾಝ್ನಬಲ್ಲಿ ಮನಸ್ಸಿನ ಏಕಾಗ್ರತೆಯನ್ನು ಹಾಳುಗೆಡಹುತ್ತದೆ. ಇಮಾಮ್ ಗಝ್ಝಾಲಿ ತಮ್ಮ ಇಹ್ಯಾಉಲೂಮುದ್ದೀನ್ ನಲ್ಲಿ, ಅತಿಭೋಜನದ ಕೆಡುಕುಗಳನ್ನು ಎಣಿಸಿ ಹೇಳಿದ್ದಾರೆ: `ಅತಿ ಬೋಜನವು ಬುದ್ಧಿಯ ಪ್ರಕ್ರಿಯೆಗಳನ್ನು ಕೆಡಿಸಿ, ಹೃದಯದ ಒಳದೃಷ್ಟಿ ಯನ್ನು ನಷ್ಟಗೊಳಿಸುತ್ತದೆ. ಅದರಿಂದಾಗಿ ವಿಷಯ ಗಳನ್ನು ಸುಲಭದಲ್ಲಿ ಗ್ರಹಿಸಲು ಸಾಧ್ಯವಾಗುವುದಿಲ್ಲ’ ಅರ್ಥಾತ್, ಅಮಿತ ಆಹಾರವು ನಮ್ಮ ಬುದ್ಧಿ ಮತ್ತು ಮನಸ್ಸನ್ನು ಮರಗಟ್ಟಿಸಿ ತಿಳುವಳಿಕೆಯನ್ನು ನಾಶಗೊಳಿಸಿ ನಮ್ಮನ್ನು ಸಂಪೂರ್ಣವಾಗಿ ಸೋಮಾರಿಗಳನ್ನಾಗಿ ಮಾಡುತ್ತದೆ. ಪ್ರವಾದಿವರ್ಯರು(ಸ) ಹೇಳಿದರು: `ಹಸಿವೆಯು ಜ್ಞಾನದ ಪ್ರಕಾಶವಾಗಿದೆ. ಅಮಿತ ಭೋಜನವು ಅಲ್ಲಾಹನಿಂದ ದೂರವಾಗುವ ಸಂಕೇತವಾಗಿದೆ. ಆದ್ದರಿಂದ, ಅಮಿತ ಭೋಜನದಿಂದ ನಾವು ಹೃದ ಯದಿಂದ ಜ್ಞಾನದ ಪ್ರಕಾಶವನ್ನು ನಂದಿಸಿಬಿಡುತ್ತೇವೆ.
ಅಮಿತ ಬೋಜನವನ್ನು ಪ್ರವಾದಿವರ್ಯರು(ಸ) ಅವಿಶ್ವಾಸಿಯ ಸ್ವಭಾವವೆಂದೂ ವರ್ಣಿಸಿದ್ದಾರೆ. ಬುಖಾರಿ ಮತ್ತು ಮುಸ್ಲಿಮ್ ಉದ್ಧರಿಸಿರುವ ಒಂದು ಹದೀಸ್ ನಲ್ಲಿ ಹೀಗಿದೆ: ಸತ್ಯವಿಶ್ವಾಸಿಯು ಒಂದು ಜಠರದಿಂದ ತಿನ್ನುವಾಗ ಅವಿಶ್ವಾಸಿಯು ಏಳು ಜಠರಗಳಲ್ಲಿ ತಿನ್ನುತ್ತಾನೆ. ಇಲ್ಲಿ ಸತ್ಯವಿಶ್ವಾಸಿ ಮತ್ತು ಅವಿಶ್ವಾಸಿಯ ಆಹಾರ ಶೈಲಿಯ ವ್ಯತ್ಯಾಸವನ್ನು ಸೂಚಿಸಲಾಗಿದೆ. ಮಿತಾಹಾರ ಸೇವನೆಯು ಸತ್ಯವಿಶ್ವಾಸಿಗೆ ಕೇವಲ ಆರೋಗ್ಯದಾಯಕ ಕರ್ಮ ಮಾತ್ರವಲ್ಲ, ಅವನ ಧಾರ್ಮಿಕ ಕರ್ತವ್ಯವೂ ಆಗಿದೆ. ಒಮ್ಮೆ ಡೊಳ್ಳೊಟ್ಟೆಯ ಓರ್ವರನ್ನು ಪ್ರವಾದಿ ವರ್ಯರು(ಸ) ನೋಡಿದಾಗ ಅವರ ಹೊಟ್ಟೆಗೆ ಬೆಟ್ಟು ಮಾಡಿ,ಇದು ಇಲ್ಲದಿರುತ್ತಿದ್ದರೆ ಅದೇ ನಿನಗೆ ಹಿತಕರವಾಗುತ್ತಿತ್ತು’ ಎಂದು ಹೇಳಿದರು. (ಅಹ್ಮದ್, ಬೈಹಕಿ) ಅಮಿತ ಆಹಾರ ಸೇವನೆಯಿಂದಾಗುವ ಡೊಳ್ಳೊಟ್ಟೆಯನ್ನು ಸೂಚಿಸಿ ಪ್ರವಾದಿ(ಸ) ಆ ರೀತಿ ಹೇಳಿದ್ದರು. ಆಹಾರವು ಒಂದು ಫ್ಯಾಶನ್ ಮತ್ತು ಆಡಂಬರದ ಪ್ರತೀಕವಾಗಿರುವ ಈ ಕಾಲದಲ್ಲಿ ಇಸ್ಲಾಮ್ ಆದೇಶಿಸಿರುವ ಹೊಟ್ಟೆಯ 3/2 ಭಾಗ ವನ್ನು ಆಹಾರ ಪಾನೀಯ ಮತ್ತು ಉಳಿದ ಭಾಗ ವನ್ನು ಉಸಿರಾಟಕ್ಕೆ ಅಡ್ಡಿಯಾಗದಂತೆ ಶೂನ್ಯವಾಗಿರಿಸಲು ಮಾನವನು ಸಿದ್ಧನಾದರೆ ಆತನಿಗೆ ಆರೋಗ್ಯ ಪೂರ್ಣ ದೇಹ ಮತ್ತು ಆರೋಗ್ಯಪೂರ್ಣ ಮನಸ್ಸು ಪ್ರಾಪ್ತವಾಗುತ್ತದೆ. ಆರೋಗ್ಯಪೂರ್ಣ ದೇಹವು ಇಸ್ಲಾಮಿನ ಗುರಿಯಾಗಿದೆ. ಆದ್ದರಿಂದಲೇ ಇಸ್ಲಾಮ್ ಸುವ್ಯವಸ್ಥಿತ ಮತ್ತು ವೈಜ್ಞಾನಿಕ ಆಹಾರ ಶೈಲಿಯನ್ನು ಕಲಿಸುತ್ತಿದೆ. ನಿರಂತರವಾದ ಒಂದು ತಿಂಗಳ ಉಪವಾಸವು ಇದಕ್ಕೊಂದು ಉತ್ತಮ ನಿದರ್ಶನ.